ಮಹಾಮೈತ್ರಿಯಲ್ಲಿ ಕಾಂಗ್ರೆಸ್ ವಂಚಿಸಿದರೆ ಪ್ರತಿಪಕ್ಷಗಳು ಕೂಡ ‘ಮೀ ಟೂ’ ಎನ್ನಲಿದೆ: ರಾಜನಾಥ್ ಸಿಂಗ್
ಹೊಸದಿಲ್ಲಿ, ಅ. 27: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರತಿಪಕ್ಷಗಳನ್ನು ಎಚ್ಚರಿಸುವ ಸಲುವಾಗಿ ಹೈದರಾಬಾದ್ನಲ್ಲಿ ನಡೆದ ಬಿಜೆಪಿ ಯುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘ಮೀ ಟೂ’ ಚಳವಳಿಯ ಹೋಲಿಕೆ ನೀಡಿದ್ದಾರೆ.
ಪ್ರಾದೇಶಿಕ ಪಕ್ಷಗಳಿಗೆ ಎಚ್ಚರಿಕೆ ನೀಡಿರುವ ಸಚಿವರು, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವವರು ರಾಜಕೀಯ ಕ್ಷೇತ್ರದಲ್ಲಿ ವಿಫಲರಾಗುತ್ತಾರೆ. ಕಾಂಗ್ರೆಸ್ನಿಂದ ವಂಚನೆಗೆ ಒಳಗಾದ ಮಿತ್ರ ಪಕ್ಷಗಳು ‘ಮೀ ಟೂ’ ಎಂದು ಕೂಗಿಕೊಳ್ಳುವ ಸನ್ನಿವೇಶ ಬರಬಾರದು ಎಂದು ಸಿಂಗ್ ಎಚ್ಚರಿಸಿದ್ದಾರೆ.
ಆಸಕ್ತಿದಾಯಕ ವಿಚಾರವೆಂದರೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಯಲು, ನಿಭಾಯಿಸಲು ಕಾನೂನಾತ್ಮಕ ಹಾಗೂ ಸಾಂಸ್ಥಿಕ ಚೌಕಟ್ಟನ್ನು ಸಶಕ್ತಗೊಳಿಸಲು ಸಚಿವರ ಗುಂಪಿನ ಸಮಿತಿಯ ಮುಖ್ಯಸ್ಥರಾಗಿ ರಾಜನಾಥ್ ಸಿಂಗ್ ಆಯ್ಯೆಯಾಗಿದ್ದಾರೆ. ಗೃಹ ಸಚಿವರು ಮಹಿಳೆಯರ ಚಳವಳಿ ‘ಮೀ ಟೂ’ವನ್ನು ತಮಾಷೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕನ ಮುಖದಲ್ಲಿ ಹಾಗೂ ಭಾಷೆಯಲ್ಲಿ ಹತಾಶೆ ಕಾಣುತ್ತಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.