ಮುಝಫ್ಫರ್ಪುರ ಪ್ರಕರಣ: ಬಿಹಾರದ ಮಾಜಿ ಸಚಿವೆಯ ಪತಿ ನ್ಯಾಯಾಲಯಕ್ಕೆ ಶರಣು
ಪಾಟ್ನ, ಅ.29: ಮುಝಫ್ಪರ್ಪುರ ಆಶ್ರಯಧಾಮ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಸಚಿವೆ ಮಂಜು ವರ್ಮರ ಪತಿ ಚಂದ್ರಶೇಖರ್
ವರ್ಮ ಸೋಮವಾರ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ವರ್ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬೆಗುಸರಾಯ್ ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ.
ಆಶ್ರಯಧಾಮದಲ್ಲಿದ್ದ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವುದು ಕಳೆದ ಜೂನ್ನಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ಬೃಜೇಶ್ ಠಾಕೂರ್ ಬಿಹಾರದ ಸಚಿವೆಯಾಗಿದ್ದ ಮಂಜು ವರ್ಮರ ಪತಿ ಚಂದ್ರಶೇಖರ್ ವರ್ಮಗೆ ನಿಕಟವಾಗಿದ್ದ ಎಂಬ ವರದಿಯ ಹಿನ್ನೆಲೆಯಲ್ಲಿ ವರ್ಮ ಮನೆಗೆ ದಾಳಿ ನಡೆಸಿದ್ದ ಸಿಬಿಐ 50 ಸಜೀವ ಕಾರ್ಟ್ರಿಜ್ಡ್ಗಳನ್ನು ವಶಕ್ಕೆ ಪಡೆದು ವರ್ಮ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಮಂಜು ವರ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಬಿಐ ಎಫ್ಐಆರ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಪೊಲೀಸರು ವರ್ಮ ವಿರುದ್ಧ ವಾರಂಟ್ ಜಾರಿಗೊಳಿಸಿದ್ದು ಅಂದಿನಿಂದ ವರ್ಮ ತಲೆಮರೆಸಿಕೊಂಡಿದ್ದ.