ರಾಜೀನಾಮೆ ನೀಡಲಿರುವ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್?
ಕೇಂದ್ರ-ಆರ್ ಬಿಐ ನಡುವಿನ ಸಂಘರ್ಷ
ಹೊಸದಿಲ್ಲಿ, ಅ.31: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆಯೆಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ನಿಟ್ಟಿನಲ್ಲಿ ಆರ್ಬಿಐ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತರುವಾಯ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಟ್ವೀಟ್ ಮಾಡಿ, ``ವರದಿಗಳಂತೆ ಸರಕಾರ ಆರ್ಬಿಐ ಕಾಯಿದೆಯ ಸೆಕ್ಷನ್ 7 ಅನ್ವಯ ತನ್ನ ಅಧಿಕಾರ ಪ್ರಯೋಗಿಸಿ ಆರ್ಬಿಐಗೆ ಅಭೂತಪೂರ್ವ ಸೂಚನೆಗಳನ್ನು ನೀಡಿದೆಯೆಂದಾದರೆ, ಇಂದು ಇನ್ನಷ್ಟು ಕೆಟ್ಟ ಸುದ್ದಿ ಇರಬಹುದು'' ಎಂದು ಹೇಳಿದ್ದಾರೆ.
ಮಂಗಳವಾರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿ ಬ್ಯಾಂಕುಗಳ ಅನುತ್ಪಾದಕ ಸಾಲ ಪ್ರಮಾಣದ ಹೆಚ್ಚಳಕ್ಕೆ ರಿಸರ್ವ್ ಬ್ಯಾಂಕನ್ನು ದೂರಿದರಲ್ಲದೆ ಅದು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿಲ್ಲ ಎಂದಿದ್ದರು.
ಇದಕ್ಕೂ ಮುನ್ನ ಅಕ್ಟೋಬರ್ 26ರಂದು ಆರ್ಬಿಐ ಉಪ ಗವರ್ನರ್ ವಿರಾಲ್ ಆಚಾರ್ಯ ವಸ್ತುಶಃ ಕೇಂದ್ರ ಸರಕಾರವನ್ನು ಟೀಕಿಸಿ ಅದು ರಿಸರ್ವ್ ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ್ದರು.