ಆರ್ಬಿಐ ಉಪಗವರ್ನರ್ ವಿರುದ್ಧ ಗವರ್ನರ್ಗೆ ದೂರು
ಹೊಸದಿಲ್ಲಿ,ಅ.31: ನಿಯಂತ್ರಕ ಸ್ವಾಯತ್ತತೆಯನ್ನು ಕಾಪಾಡುವ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಆರ್ಬಿಐಯ ಉಪಗವರ್ನರ್ ವಿರಲ್ ಆಚಾರ್ಯ ನೀಡಿರುವ ಹೇಳಿಕೆಯ ವಿರುದ್ಧ ಆರ್ಬಿಐ ಮಂಡಳಿ ಸದಸ್ಯ ಎಸ್.ಗುರುಮೂರ್ತಿ ಗವರ್ನರ್ ಊರ್ಜಿತ್ ಪಟೇಲ್ಗೆ ದೂರು ನೀಡಿದ್ದಾರೆ.
ಆರ್ಬಿಐಯ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವುದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ ಮತ್ತು ಕೇಂದ್ರ ಬ್ಯಾಂಕ್ನ ಅಧಿಕಾರಿಗಳ ಕಿತ್ತಾಟ ಅದರ ಮಾನವ ಬಂಡವಾಳದ ಕಿತ್ತಾಟಕ್ಕೆ ಕಾರಣವಾಗುತ್ತದೆ ಮತ್ತು ಅದರ ಸಾಮರ್ಥ್ಯ ಮತ್ತು ಇಷ್ಟು ಕಾಲದ ಅನುಭವಕ್ಕೆ ಹಾನಿ ಮಾಡುತ್ತದೆ ಎಂದು ಆಚಾರ್ಯ ಮುಂಬೈಯಲ್ಲಿ ಅಕ್ಟೋಬರ್ 26ರಂದು ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಕೇವಲ ಎರಡು ದಿನಗಳ ಹಿಂದೆ ಸಭೆ ನಡೆಸಿದ್ದ ಆರ್ಬಿಐ ಮಂಡಳಿಯಲ್ಲಿ ಚರ್ಚಿಸದ ಮತ್ತು ಬಹಿರಂಗಪಡಿಸದ ವಿಷಯವನ್ನು ಆಚಾರ್ಯ ಸಾರ್ವಜನಿಕವಾಗಿ ತಿಳಿಸಿರುವುದನ್ನು ಗುರುಮೂರ್ತಿ ಆಕ್ಷೇಪಿಸಿದ್ದಾರೆ.
ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಮತ್ತು ಫೈನಾನ್ಶಿಯಲ್ ಸರ್ವೀಸಸ್ (ಐಎಲ್ಆ್ಯಂಡ್ಎಫ್ಎಸ್) ನಿಂದ ಸಾಲ ಬಾಕಿಯಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬ್ಯಾಂಕೇತರ ವಿತ್ತ ಕಂಪೆನಿಗಳಲ್ಲಿ ಎದುರಾಗಿರುವ ಹಣದ ಹರಿವಿನ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಆರ್ಬಿಐ ಮಂಡಳಿ ಅಕ್ಟೋಬರ್ 23ರಂದು ಸಭೆ ಸೇರಿತ್ತು.