ಯುಎಇ ನೆರವು ನಿರಾಕರಣೆ: ಕೇಂದ್ರದ ನಡೆಯಲ್ಲಿ ನಿಗೂಢತೆ ಇದೆ ಎಂದ ಪಿಣರಾಯಿ ವಿಜಯನ್
ತಿರುವನಂತಪುರ, ನ. 8: ಕೇರಳ ನೆರೆ ಪರಿಹಾರ ನಿಧಿಗೆ ಯುಎಇ ನೆರವು ನಿರಾಕರಿಸಲು ಕೇಂದ್ರಕ್ಕೆ ಕಾರಣವಾದ ಅಂಶದ ಬಗ್ಗೆ ನಿಗೂಢತೆ ಇನ್ನೂ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ. ಅಬುಧಾಬಿಯ ಯುವರಾಜ ಶೇಕ್ ಮುಹಮ್ಮದ್ ಬಿನ್ ಝಾಯೇದ್ ಬಿನ್ ಸುಲ್ತಾನ್ ಅಲ್ ನಹ್ಸಾನ್ ಅವರ ಅನುಮತಿಯೊಂದಿಗೆ ಯುಎಇಯ 700 ಕೋ. ರೂ. ಪ್ರಸ್ತಾವವನ್ನು ಉದ್ಯಮಿ ಎಂ.ಎ. ಯೂಸುಫ್ ಅಲಿ ಬಹಿರಂಗಗೊಳಿಸಿದ್ದರು. ಕೇರಳಕ್ಕೆ ಯುಎಇಯ ಕೊಡುಗೆ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಿದ್ದರು ಎಂದು ಅವರು ಹೇಳಿದ್ದಾರೆ. ಆದರೆ, ಯುಎಇಯ ಕೊಡುಗೆ ಸ್ವೀಕರಿಸಲು ಕೇಂದ್ರ ಸರಕಾರ ನಿರಾಕರಿಸಿತು. ‘‘ನಮಗೆ ಅನುಮತಿ ನೀಡಿದ್ದರೆ, ಕೇರಳ ಹಲವು ದೇಶಗಳಿಂದ ಸಾವಿರಾರು ಕೋಟಿ ರೂ. ಸ್ವೀಕರಿಸುತ್ತಿತ್ತು.’’ ಎಂದು ಅವರು ಹೇಳಿದರು.
ನೆರೆ ಕಾರ್ಯಾಚರಣೆ ಬಳಿಕ ಹಾಗೂ ನವ ಕೇರಳದ ಮರು ನಿರ್ಮಾಣದ ಕುರಿತು ಕೇರಳ ಗ್ರಾ. ಪಂ. ಅಸೋಸಿಯೇಶನ್ ಹಾಗೂ ಕೇರಳ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಅಡ್ಮಿನಿಸ್ಟ್ರೇಶನ್ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಪಿಣರಾಯಿ ವಿಜಯನ್ ಮಾತನಾಡಿದರು.