ಶಬರಿಮಲೆ ವಿವಾದ: ಬಂಧಿತ ಪ್ರತಿಭಟನಕಾರರಿಗೆ ಜಾಮೀನು ನಿರಾಕರಣೆ
ತಿರುವನಂತಪುರ, ನ. 8: ಶಬರಿಮಲೆ ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ತಡೆದ ಆರೋಪದಲ್ಲಿ ಬಂಧಿತರಾಗಿರುವ ಪ್ರತಿಭಟನಕಾರರಿಗೆ ಜಾಮೀನು ನೀಡಲು ಗುರುವಾರ ಕೇರಳ ಉಚ್ಚ ನ್ಯಾಯಾಲಯ ನಿರಾಕರಿಸಿದೆ.
ದೇವಾಲಯದ ಸಂಪ್ರದಾಯ ಉಲ್ಲಂಘಿಸುತ್ತಿರುವುದಾಗಿ ಆರೋಪಿಸಿ ಟಿಡಿಬಿ ಸದಸ್ಯ ಕೆ.ಪಿ. ಶಂಕರ್ ದಾಸ್ ಅವರನ್ನು ವಜಾಗೊಳಿಸುವಂತೆ ಕೋರಿ ಟಿಡಿಬಿಯ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಸಲ್ಲಿಸಿದ ಮನವಿಯನ್ನು ಕೂಡ ಕೇರಳ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಇಂದು ಬೆಳಗ್ಗೆ ಶಬರಿಮಲೆ ರಕ್ಷಿಸಿ ಯಾತ್ರೆಗೆ ಮಟ್ಟೂರಿನಲ್ಲಿ ಬಿಜೆಪಿ ಹಸಿರು ನಿಶಾನೆ ತೋರಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಿದ ಸಿಪಿಎಂ ನೇತೃತ್ವದ ಎಲ್ಡಿಎಫ್ ನಿಲುವನ್ನು ವಿರೋಧಿಸಿ ಮೆಟ್ಟೂರಿನಿಂದ ಶಬರಿಮಲೆ ವರೆಗೆ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.
ರಥ ಯಾತ್ರೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇರಳ ಬಿಜೆಪಿ ವರಿಷ್ಠ ಪಿ.ಎಸ್. ಶ್ರೀಧರನ್ ಪಿಳ್ಳೈ ಉದ್ಘಾಟಿಸಿದರು. ರಥಯಾತ್ರೆ ಉದ್ಘಾಟನೆಗೆ ಮುನ್ನ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಈ ಪಾದಯಾತ್ರೆಯಲ್ಲಿ ಭಾಗವಹಿಸುವವರು ನವೆಂಬರ್ 30ರಂದು ಶಬರಿಮಲೆ ತಲುಪುವರು ಎಂದರು. ‘‘ಮಟ್ಟೂರಿನಿಂದ ಇಂದು ಆರಂಭವಾದ ರಥಯಾತ್ರೆ 30ರಂದು ಶಬರಿಮಲೆ ತಲುಪಲಿದೆ. ನಮ್ಮ ಸಂಸ್ಕೃತಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುತ್ತದೆ. ಅವರಿಗೆ ಗೌರವ ನೀಡುತ್ತದೆ. ಇದೆಲ್ಲಾ ಆಗಿರುವುದು ಕೇರಳ ಸರಕಾರದಿಂದ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ಕುರಿತು ಪ್ರತಿಪಾದಿಸುವಲ್ಲಿ ಕೇರಳ ಸರಕಾರ ವಿಫಲವಾಗಿದೆ. ಆದುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ’’ ಎಂದು ಯಡಿಯೂರಪ್ಪ ಹೇಳಿದರು.