ಆರ್ ಬಿಐ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಕೇಳಿಲ್ಲ: ಸರಕಾರದ ಸ್ಪಷ್ಟನೆ
ಹೊಸದಿಲ್ಲಿ, ನ.9: ತಾನು ರಿಸರ್ವ್ ಬ್ಯಾಂಕ್ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ.ಗಳನ್ನು ಕೇಳಿಲ್ಲವೆಂದು ಸರಕಾರ ಶುಕ್ರವಾರ ಸ್ಪಷ್ಟ ಪಡಿಸಿದೆ. ರಿಸರ್ವ್ ಬ್ಯಾಂಕಿಗೆ ಸೂಕ್ತ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿಗದಿ ಪಡಿಸುವ ಕುರಿತಂತೆ ಮಾತ್ರ ಸರಕಾರ ಚರ್ಚೆ ನಡೆಸುತ್ತಿದೆ ಎಂದು ಅದು ತಿಳಿಸಿದೆ.
“ಮಾಧ್ಯಮದಲ್ಲಿ ಸಾಕಷ್ಟು ತಪ್ಪು ಊಹಾಪೋಹಗಳಿವೆ. ವಿತ್ತ ವಿಚಾರಗಳಲ್ಲಿ ಸರಕಾರ ಸರಿಯಾದ ಹಾದಿಯಲ್ಲಿಯೇ ಇದೆ. ಊಹಾಪೋಹಗಳಂತೆ ಆರ್ಬಿಐಗೆ ರೂ 3.6 ಲಕ್ಷ ಕೋಟಿ ಅಥವಾ ಒಂದು ಲಕ್ಷ ಕೋಟಿ ಹಸ್ತಾಂತರಿಸುವಂತೆ ಹೇಳುವ ಪ್ರಸ್ತಾಪವಿಲ್ಲ'' ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 2019ಕ್ಕೆ ಅಂತ್ಯಗೊಳ್ಳುವ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇ 3.3 ಆರ್ಥಿಕ ಕೊರತೆ ಗುರಿಗೆ ಸರಕಾರ ಅಂಟಿಕೊಳ್ಳುವುದು ಎಂದು ಅವರು ತಿಳಿಸಿದ್ದಾರೆ.
“ಸರಕಾರದ ಆರ್ಥಿಕ ಕೊರತೆ ಆರ್ಥಿಕ ವರ್ಷ 2013-14ರಲ್ಲಿ ಶೇ 5.1ರಷ್ಟಿತ್ತು, 2014-15ರಿಂದ ಅದು ಕಡಿಮೆಯಾಗುತ್ತಾ ಬಂದು 2018-19 ಆರ್ಥಿಕ ವರ್ಷದ ಅಂತ್ಯಕ್ಕೆ ಅದು ಶೇ 3.3ರಷ್ಟಾಗಲಿದೆ'' ಎಂದು ಗರ್ಗ್ ಟ್ವೀಟ್ ಮಾಡಿದ್ದಾರೆ.