ವಾಮಾಚಾರದ ಶಂಕೆಯಿಂದ ದಂಪತಿಯ ಹತ್ಯೆ,ಇಬ್ಬರ ಬಂಧನ
ಪುಣೆ,ನ.9: ಪುಣೆ ಜಿಲ್ಲೆಯ ಖೇಡ್ ತಾಲೂಕಿನ ಔಂಧೆ ಗ್ರಾಮದಲ್ಲಿ ವಾಮಾಚಾರ ನಡೆಸುತ್ತಿದ್ದಳೆಂಬ ಶಂಕೆಯಿಂದ ಮಹಿಳೆ ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡಲಾಗಿದೆ.
ಗುರುವಾರ ಈ ಭೀಕರ ಘಟನೆ ನಡೆದಿದ್ದು,ಕೊಲೆಯಾದವರನ್ನು ಲೀಲಾಬಾಯಿ ಮುಕನೆ(47) ಮತ್ತು ಆಕೆಯ ಪತಿ ನವಸು ಮುಕನೆ(55) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಜೈತು ಬೋರ್ಕರ್ ಮತ್ತು ಬಬನ್ ಮುಕನೆ ಎನ್ನುವವರನ್ನು ಖೇಡ್ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆ ನಕಲಿ ವೈದ್ಯೆಯಾಗಿದ್ದಳು. ಆದರೆ ಆಕೆ ವಾಮಾಚಾರವನ್ನು ನಡೆಸುತ್ತಿದ್ದಳು ಎಂದು ಗ್ರಾಮದ ಕೆಲವರು ಶಂಕಿಸಿದ್ದರು. ಕೆಲವು ದಿನಗಳ ಹಿಂದೆ ಬೋರ್ಕರ್ನ ಪುತ್ರಿಗೆ ಹೊಟ್ಟೆಯಲ್ಲಿ ಸಣ್ಣಗಂಟು ಬೆಳೆದಿತ್ತು ಮತ್ತು ಇದಕ್ಕೆ ಲೀಲಾಬಾಯಿಯ ವಾಮಾಚಾರ ಕಾರಣವೆಂದು ಆತ ಶಂಕಿಸಿದ್ದ. ಬಬನ್ನ ಹೆಂಡತಿಗೂ ಮೈಮೇಲೆ ದದ್ದುಗಳಾಗಿದ್ದು,ಆಕೆಯೂ ಲೀಲಾಬಾಯಿಯ ವಾಮಾಚಾರ ಕಾರಣವೆಂದು ಶಂಕಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
Next Story