ಅಕ್ರಮ ಟೆಲಿಪೋನ್ ಎಕ್ಸ್ಚೇಂಜ್ ಸ್ಥಾಪನೆ: ಮಾರನ್ ಸಹೋದರರ ಆರೋಪ ಕೈಬಿಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ, ನ. 9: ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ರದ್ದುಗೊಳಿಸುವಂತೆ ಕೋರಿ ಮಾಜಿ ಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಸಲ್ಲಿಸಿದ ಮನವಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ತಮ್ಮ ಮೇಲಿನ ಆರೋಪ ಸುಳ್ಳು ಹಾಗೂ ಅದನ್ನು ರದ್ದುಪಡಿಸಬೇಕು. ತನಿಖಾಧಿಕಾರಿಗಳ ಅಭಿಪ್ರಾಯ ಆಧರಿಸಿ ಆರೋಪ ಪಟ್ಟಿ ರೂಪಿಸಲಾಗಿದೆ. ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಮಾರನ್ ಸಹೋದರ ಪರ ವಕೀಲರು ಪ್ರತಿಪಾದಿಸಿದ್ದರು. ಸಿಬಿಐ ಹೇಳುವಂತೆ ಮಾಜಿ ಸಚಿವರು 764 ಟೆಲಿಫೋನ್ಗಳನ್ನು ಹೊಂದಿರಲಿಲ್ಲ. ಅಲ್ಲದೆ ಸಚಿವರು 3ಕ್ಕಿಂತ ಹೆಚ್ಚು ಟೆಲಿಫೋನ್ಗಳನ್ನು ಹೊಂದಬಾರದು ಎಂಬ ಯಾವುದೇ ನಿಯಮ ಇಲ್ಲ ಎಂದು ಮಾರನ್ ಸಹೋದರರ ಪರ ವಕೀಲರು ಪ್ರತಿಪಾದಿಸಿದ್ದಾರೆ. ಕಲಾನಿಧಿ ಮಾರನ್ಗೆ ಸಹಾಯವಾಗಲು 2004-05ರಲ್ಲಿ ಅಕ್ರಮ ಟೆಲಿಪೋನ್ ಎಕ್ಸ್ಚೇಂಜ್ ಸ್ಥಾಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ಸಿಬಿಐ ನ್ಯಾಯಾಲಯ ಆಗಸ್ಟ್ 30ರಂದು ಆರೋಪ ಪಟ್ಟಿ ರೂಪಿಸಿತ್ತು ಹಾಗೂ ದಯಾನಿಧಿ ಮಾರನ್, ಇತರ ಆರು ಮಂದಿ ವಿರುದ್ಧ ವಿಚಾರಣೆಗೆ ಆದೇಶಿಸಿತ್ತು.