ಅಪರಾಧಿ ಹಿನ್ನೆಲೆಯನ್ನು ಬಹಿರಂಗಪಡಿಸದ ಅಭ್ಯರ್ಥಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು: ಚು.ಆಯೋಗ
ಹೊಸದಿಲ್ಲಿ,ನ.11: ಚುನಾವಣೆಯ ಸಮಯದಲ್ಲಿ ತಮ್ಮ ಅಪರಾಧಿ ಹಿನ್ನೆಲೆಯನ್ನು ಸಾರ್ವಜನಿಕಗೊಳಿಸದ ಅಭ್ಯರ್ಥಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ. ಜೊತೆಗೆ, ತಮ್ಮ ವಿರೋಧಿ ಅಭ್ಯರ್ಥಿಯ ಅಪರಾಧಿ ಹಿನ್ನೆಲೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವವರು ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಪರಾಧಿ ಹಿನ್ನೆಲೆ ಬಗ್ಗೆ ಚುನಾವಣಾ ಸಮಯದಲ್ಲಿ ಟಿವಿ ಮತ್ತು ಪತ್ರಿಕೆಗಳಲ್ಲಿ ಕನಿಷ್ಟ ಮೂರು ಬಾರಿ ಜಾಹೀರಾತುಗಳನ್ನು ಹಾಕುವುದನ್ನು ಆಯೋಗ ಅಕ್ಟೋಬರ್ 10ರಂದು ಕಡ್ಡಾಯಗೊಳಿಸಿತ್ತು. ಮಧ್ಯ ಪ್ರದೇಶ, ರಾಜಸ್ತಾನ, ಚತ್ತೀಸ್ಗಡ, ಮಿಝೊರಾಂ ಮತ್ತು ತೆಲಂಗಾಣದಲ್ಲಿ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರಾಜ್ಯ ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ಈ ಸೂಚನೆಯ ಪ್ರಕಾರ, ರಾಜಕೀಯ ಪಕ್ಷಗಳೂ ತನ್ನ ಅಭ್ಯರ್ಥಿಗಳ ಅಪರಾಧಿ ಹಿನ್ನೆಲೆಯನ್ನು ಸಾರ್ವಜನಿಕಗೊಳಿಸಬೇಕಿದೆ.