ರಫೇಲ್ ಬೆಲೆಯನ್ನು ಮೋದಿ ಯೋಧರಿಗೆ ತಿಳಿಸಬೇಕಿತ್ತು: ಕನ್ಹಯ್ಯ ಕುಮಾರ್
ಬೇಗುಸರಾಯ್, ನ. 11: ವಿವಾದಾತ್ಮಕ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಸಂದರ್ಭ ರಫೇಲ್ ಜೆಟ್ಗಳ ಬೆಲೆಯನ್ನು ಅವರಿಗೆ ತಿಳಿಸಬೇಕಿತ್ತು ಎಂದಿದ್ದಾರೆ.
ಕನ್ಹಯ್ಯ ಕುಮಾರ್ ಮುಂಬರುವ ಚುನಾವಣೆಯಲ್ಲಿ ತನ್ನ ಹುಟ್ಟೂರಾದ ಬೇಗುಸರಾಯ್ನಿಂದ ಸ್ಪರ್ಧಿಸುವ ಸಿದ್ಧತೆಯಲ್ಲಿ ಇದ್ದಾರೆ.
ಪ್ರಧಾನಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮನ ಹೆಸರು ಹೇಳಿ ಚುನಾವಣೆಯಲ್ಲಿ ಜಯ ಗಳಿಸಲು ಅವರು ಬಯಸುತ್ತಿದ್ದಾರೆ ಎಂದರು.
ಸಿಪಿಐ ಪಾಟ್ನಾದಲ್ಲಿ ಇತ್ತೀಚೆಗೆ ನಡೆಸಿದ ‘ಬಿಜೆಪಿ ತೊಲಗಿಸಿ, ದೇಶ ರಕ್ಷಿಸಿ’ ರ್ಯಾಲಿಯಲ್ಲಿ ಕನ್ಹಯ್ಯ ಕುಮಾರ್ ಅವರನ್ನು ರಾಜಕೀಯ ಪ್ರವೇಶಿಸಿದ್ದರು.
ಕಾಂಗ್ರೆಸ್ನ ಗುಲಾಮ್ ನಬಿ ಆಝಾದ್, ಎನ್ಸಿಪಿಯ ಡಿ.ಪಿ. ತ್ರಿಪಾಠಿ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತೇನ್ ರಾಮ್ ಜೆಠ್ಮಲಾನಿ ಹಾಗೂ ಇತರರು ಕನ್ಹಯ್ಯ ಕುಮಾರ್ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದರು.
ಪಾಟ್ನಾದಲ್ಲಿ ಕಳೆದ ತಿಂಗಳು ಏಮ್ಸ್ನ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಯ್ಯ ಕುಮಾರ್, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿರುವ ವೈದ್ಯರು ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದಿದ್ದಾರೆ.