ನನ್ನ ಹತ್ಯೆಗೆ 11 ಜನರು ಹೈದರಾಬಾದ್ಗೆ ಬಂದಿದ್ದಾರೆ: ಅಕ್ಬರುದ್ದೀನ್ ಉವೈಸಿ
ಹೈದರಾಬಾದ್,ನ.12: ತನಗೆ ಜೀವ ಬೆದರಿಕೆಯಿದೆ ಮತ್ತು ತನ್ನನ್ನು ಕೊಲ್ಲಲು ಬನಾರಸ್,ಅಲಹಾಬಾದ್ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 11 ಜನರು ಹೈದರಾಬಾದ್ಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ ಆರೋಪಿಸಿದ್ದಾರೆ.
ಶುಕ್ರವಾರ ಇಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ತನ್ನನ್ನು ಕೊಲ್ಲುವುದಾಗಿ ಕೆಲವರು ತನಗೆ ಪತ್ರಗಳನ್ನು ಬರೆದಿದ್ದಾರೆ,ಫೋನ್ ಕರೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ತಾನು ಸಾಯಲು ಸಿದ್ಧನಿದ್ದೇನೆ. ತಾನು ಎದೆಗೆ ಗುಂಡೇಟು ತಿನ್ನುತ್ತೇನೆಯೇ ಹೊರತು ಬೆನ್ನಿಗಲ್ಲ ಎಂದು ಡಿ.7ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಾಯನಗುಟ್ಟಾ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ಉವೈಸಿ ಹೇಳಿದರು.
2011,ಎ.30ರಂದು ಬರ್ಕಾಸ್ನ ಎಐಎಂಐಎಂ ಕಚೇರಿಯ ಬಳಿ ಗುಂಪೊಂದು ತನ್ನ ಮೇಲೆ ಮಾರಕಾಸ್ತ್ರಗಳು ಮತ್ತು ಗುಂಡಿನ ದಾಳಿ ನಡೆಸಿದ್ದನ್ನು ನೆನಪಿಸಿಕೊಂಡ ಪಕ್ಷದ ವರಿಷ್ಠ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯವರ ಕಿರಿಯ ಸೋದರರಾಗಿರುವ ಉವೈಸಿ,ಆಗ ಮೂರು ಗುಂಡುಗಳು ತಗುಲಿದ್ದರೂ ತಾನು ಬದುಕುಳಿದಿದ್ದೇನೆ. ನಿಮ್ಮ ಗುಂಡುಗಳು ನನ್ನನ್ನು ಕೊಲ್ಲುತ್ತವೆಯೇ ಎಂದು ಪ್ರಶ್ನಿಸಿದರು.