1984ರ ಸಿಖ್ ವಿರೋಧಿ ದಂಗೆ: ಇಬ್ಬರ ವಿರುದ್ಧದ ಕೊಲೆ ಅಪರಾಧ ಸಾಬೀತು
ಹೊಸದಿಲ್ಲಿ, ನ.14: 1984ರ ಸಿಖ್ ವಿರೋಧಿ ಹಿಂಸಾಚಾರದ ಸಂದರ್ಭ ದಕ್ಷಿಣ ದಿಲ್ಲಿಯ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದ ನರೇಶ್ ಶೆರಾವತ್ ಹಾಗೂ ಯಶ್ಪಾಲ್ ಸಿಂಗ್ ದೋಷಿಗಳು ಎಂದು ದಿಲ್ಲಿಯ ನ್ಯಾಯಾಲಯ ತೀರ್ಪು ನೀಡಿದೆ.
ಹಿಂಸಾಚಾರದ ಸಂದರ್ಭ ದಕ್ಷಿಣ ದಿಲ್ಲಿಯ ಮಹಿಪಾಲಪುರ ಪ್ರದೇಶದ ನಿವಾಸಿಗಳಾದ ಹರ್ದೇವ್ ಸಿಂಗ್ ಹಾಗೂ ಅವತಾರ್ ಸಿಂಗ್ರನ್ನು ಹತ್ಯೆ ಮಾಡಲಾಗಿದ್ದು ಹರ್ ದೇವ್ ಸಿಂಗ್ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ ಸಿಖ್ ವಿರೋಧಿ ದಂಗೆಯ ಕುರಿತು ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ದಳ(ಸಿಟ್) ತನಿಖೆ ಪುನರಾರಂಭಿಸಿತ್ತು.
ಐಪಿಸಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಇಬ್ಬರ ಅಪರಾಧವೂ ಸಾಬೀತಾಗಿದೆ ಎಂದು ನ್ಯಾಯಾಲಯ ತಿಳಿಸಿದ್ದು, ಗುರುವಾರ ಶಿಕ್ಷೆಯ ಪ್ರಮಾಣ ಘೋಷಿಸುವ ನಿರೀಕ್ಷೆಯಿದೆ. ಬಳಿಕ ಇಬ್ಬರು ಅಪರಾಧಿಗಳನ್ನೂ ಪೊಲೀಸರು ಕಸ್ಟಡಿಗೆ ಪಡೆದುಕೊಂಡರು. ಅಪರಾಧಿಗಳಿಗೆ ಗರಿಷ್ಠ ಮರಣದಂಡನೆ, ಕನಿಷ್ಟ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ .