ತೆಲಂಗಾಣ ಚುನಾವಣೆ : ಕೆಸಿಆರ್ ನಾಮಪತ್ರ ಸಲ್ಲಿಕೆ
ಹೈದರಾಬಾದ್, ನ.14: ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಹಾಗೂ ಟಿಆರ್ಎಸ್ ಪರಮೋಚ್ಛ ನಾಯಕ ಕೆ.ಚಂದ್ರಶೇಖರ ರಾವ್ ಅವರು ಗಜ್ವೇಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.
ಸಿದ್ದಿಪೇಟೆ ಜಿಲ್ಲೆಯ ಕೊನಾಪಲ್ಲಿ ಗ್ರಾಮದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೆಲಂಗಾಣಕ್ಕೆ ರಾಜ್ಯದ ಸ್ಥಾನಮಾನ ದೊರಕಿಸಿಕೊಟ್ಟಿರುವುದು ತನ್ನ ಬಹುದೊಡ್ಡ ಗೆಲುವಾಗಿದೆ ಎಂದರು.
ರಾಜ್ಯದ ಜನತೆಯ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷ 100 ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಸಿಆರ್ ಎದುರು ವಂತೇರು ಪ್ರತಾಪ ರೆಡ್ಡಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. 2014ರಲ್ಲಿ ಟಿಡಿಪಿ ಅಭ್ಯರ್ಥಿಯಾಗಿ ಕೆಸಿಆರ್ ಎದುರು ಸ್ಪರ್ಧಿಸಿ ಸೋತಿದ್ದ ರೆಡ್ಡಿ, ಬಳಿಕ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ತೆಲಂಗಾಣದಲ್ಲಿ ಡಿ.7ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 11ರಂದು ಮತ ಎಣಿಕೆ ನಡೆಯಲಿದೆ.