ಶಬರಿಮಲೆ ಮಕರಜ್ಯೋತಿ ಸಂದರ್ಭ 5200 ಸಿಬ್ಬಂದಿ ನಿಯೋಜನೆ
ತಿರುವನಂತಪುರಂ, ನ. 14: ಹಿಂಸಾತ್ಮಕ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಪರಿಗಣಿಸಿರುವ ಕೇರಳ ಸರಕಾರ ಶಬರಿಮಲೆ ದೇವಾಲಯದ ಮಂಡಲ ಮಕರ ಜ್ಯೋತಿ ಯಾತ್ರಾ ಅವಧಿಯಲ್ಲಿ 5200 ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಿದೆ.
ಭದ್ರತೆಯ ಮೇಲ್ವಿಚಾರಣೆಗೆ ನಿಲಕ್ಕಲ್ ಹಾಗೂ ಸನ್ನಿಧಾನ-ಹೀಗೆ ಎರಡೂ ಕಡೆಗಳಲ್ಲಿ ಓರ್ವ ಐಜಿ ಹಾಗೂ ಇಬ್ಬರು ಎಸ್ಪಿಯನ್ನು ನಿಯೋಜಿಸಲಾಗುವುದು. ಭದ್ರತಾ ವ್ಯವಸ್ಥೆಯನ್ನು ಎಡಿಜಿಪಿ ಅನಿಲ್ಕಾಂತ್ ನೋಡಿಕೊಳ್ಳಲಿದ್ದಾರೆ.
ಸಂಪೂರ್ಣ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಎಡಿಜಿಪಿ ಅನಿಲ್ಕಾಂತ್ ತೆಗೆದುಕೊಳ್ಳಲಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಎಲ್ಲ ಪ್ರಾಯದ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ತೀರ್ಪನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನವೆಂಬರ್ 16ರಂದು 10 ಗಂಟೆಯಿಂದ ಪಾದಯಾತ್ರಿಗಳು ನಿಲಕ್ಕಲ್ ದಾಟಲು ಅವಕಾಶ ನೀಡಲಾಗಿದೆ. 12 ಗಂಟೆ ನಂತರ ವಾಹನಗಳಿಗೆ ಅವಕಾಶ ನೀಡಲಾಗಿದೆ. ಯಾತ್ರಾರ್ಥಿಗಳು ಬಳಸು ಕಾಡು ದಾರಿಯಲ್ಲಿ ಗಸ್ತು ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಪ್ರಮುಖ ಭದ್ರತಾ ಸವಾಲನ್ನು ಪೊಲೀಸರು ರಾಜ್ಯ ಸರಕಾರಕ್ಕೆ ತಿಳಿಸಿದ್ದಾರೆ. ನವೆಂಬರ್ 17ರಂದು ಆರಂಭವಾಗಲಿರುವ ವಾರ್ಷಿಕ ಯಾತ್ರ ಅವಧಿಯಲ್ಲಿನ ಸಂದಿಗ್ದ ಪರಿಸ್ಥಿತಿಯನ್ನು ರಾಜ್ಯ ಸರಕಾರ ಹೇಗೆ ನಿಭಾಯಿಸಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ಹಿಂದಿನ ಆದೇಶವನ್ನು ರದ್ದುಪಡಿಸದೇ ಇರುವುದರಿಂದ ರಾಜ್ಯ ಪೊಲೀಸರಿಗೆ ಬೇರೆ ಆಯ್ಕೆ ಇಲ್ಲ. ಆದರೆ, ಶಬರಿಮಲೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅನುಕೂಲ ಮಾಡಿ ಕೊಡಬೇಕಿದೆ. ಅದು ಅಷ್ಟು ಸುಲಭವಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.