ಚುನಾವಣೆಗೆ ತಯಾರಿ: ಎಐಎಡಿಎಂಕೆಯಿಂದ ಹೊಸ ನ್ಯೂಸ್ ಚಾನೆಲ್
ಚೆನ್ನೈ, ನ.15: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷ ಇದೀಗ 24 ಗಂಟೆಗಳ ಉಪಗ್ರಹ ಟೆಲಿವಿಷನ್ ನ್ಯೂಸ್ ಚಾನಲ್ "ನ್ಯೂಸ್ ಜೆ"ಗೆ ಚಾಲನೆ ನೀಡಿದೆ. ರಾಜ್ಯದ 20 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಿಸುವ ಸಾಧ್ಯತೆ ಇರುವುದರಿಂದ ಆಡಳಿತ ಪಕ್ಷದ ನಡೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ಜಯಾ ಟಿವಿ ಎಐಎಡಿಎಂಕೆಯ ಮುಖವಾಣಿಯಾಗಿತ್ತು. ಆದರೆ ಇದೀಗ ಪದಚ್ಯುತ ಹಾಗೂ ಜೈಲುಪಾಲಾಗಿರುವ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ಕುಟುಂಬ ಸರ್ಕಾರಿ ಕಾರ್ಯಕ್ರಮಗಳಿಗೆ ಈ ಚಾನೆಲ್ನಲ್ಲಿ ನಿಷೇಧ ಹೇರಿರುವುದರಿಂದ ಹೊಸ ಚಾನಲ್ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.
"ಅಮ್ಮಾ ಸರ್ಕಾರ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳಿಗೆ ಮಾಧ್ಯಮ ಹೆಚ್ಚು ಒತ್ತು ನೀಡಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ಕೆಲವು ಸುದ್ದಿ ವಾಹಿನಿಗಳು ಋಣಾತ್ಮಕ ಸುದ್ದಿಗಳಿಗೆ ಮಹತ್ವ ನೀಡುವುದು ಮಾತ್ರವಲ್ಲದೇ, ಅದನ್ನು ಪದೇ ಪದೇ ಪ್ರಸಾರ ಮಾಡುತ್ತಿವೆ" ಎಂದು ಚಾನೆಲ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹೇಳಿದರು.
ಹಲವು ವರ್ಷಗಳಿಂದ ಡಿಎಂಕೆಯ ಸನ್ ಟಿವಿ ಹಾಗೂ ಎಐಎಡಿಎಂಕೆಯ ಜಯಾ ಟಿವಿ ನಡುವೆ ಪ್ರೇಕ್ಷಕರನ್ನು ಸೆಳೆಯುವ ಕಸರತ್ತು ನಡೆಯುತ್ತಿದ್ದು, ಇದೀಗ ಈ ಅಖಾಡಾಗೆ ಹೊಸ ಚಾನಲ್ ಪ್ರವೇಶಿಸಿದೆ.