ಅಭಿಮನ್ಯು ಕೊಲೆ ಪ್ರಕರಣದ ಆರೋಪಿಗೆ ಎಲ್ಎಲ್ಬಿ ಪರೀಕ್ಷೆ ಬರೆಯಲು ಅವಕಾಶ
ಅಭಿಮನ್ಯು
ಕೊಚ್ಚಿ, ನ.15: ಎಸ್ಎಫ್ಐ ಮುಖಂಡ , ಎರ್ನಾಕುಳಂನ ಮಹಾರಾಜಾಸ್ ಕಾಲೇಜಿನ ವಿದ್ಯಾರ್ಥಿ ಅಭಿಮನ್ಯು ಕೊಲೆ ಪ್ರಕರಣದ ಆರೋಪಿ ಮುಹಮ್ಮದ್ ರಿಫಾಗೆ ಎಲ್ಎಲ್ಬಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇರಳ ಹೈಕೋರ್ಟ್ ಮಹಾತ್ಮಾ ಗಾಂಧಿ ವಿವಿಗೆ ಸೂಚಿಸಿದೆ.
ಆದರೆ ನ್ಯಾಯಾಲಯದ ಆದೇಶದ ಹೊರತಾಗಿ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ನ್ಯಾ. ಮುಹಮ್ಮದ್ ಮುಷ್ತಾಕ್ ಆದೇಶದಲ್ಲಿ ತಿಳಿಸಿದ್ದಾರೆ. ಎರ್ನಾಕುಳಂನ ಶ್ರೀ ನಾರಾಯಣಗುರು ಕಾನೂನು ಕಾಲೇಜಿನ ಎಲ್ಎಲ್ಬಿ 4ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ರಿಫಾನನ್ನು ಕೊಲೆ ಆರೋಪದಲ್ಲಿ ಜುಲೈ 25ರಂದು ಬಂಧಿಸಲಾಗಿತ್ತು.
ಈತ 42 ದಿನ ನ್ಯಾಯಾಂಗ ಬಂಧನಲ್ಲಿದ್ದ ಕಾರಣ ವಿವಿಯಲ್ಲಿ ಹಾಜರಾತಿಯ ಕೊರತೆಯಿತ್ತು. ಇದರಿಂದ ಒಂದು ವರ್ಷ ನಷ್ಟವಾಗಿತ್ತು. ಬಳಿಕ 4 ಪೇಪರ್ಗಳಿಗೆ ಪೂರಕ ಪರೀಕ್ಷೆ ಬರೆಯುವ ಉದ್ದೇಶದಿಂದ ಅಗತ್ಯದ ಶುಲ್ಕ ಪಾವತಿಸಿದ್ದು, ನ.13ರಂದು ನಡೆದ ಪ್ರಥಮ ಪರೀಕ್ಷೆಗೆ ಹಾಜರಾಗಿದ್ದ . ಆದರೆ ನವೆಂಬರ್ 15,19 ಮತ್ತು 26ರಂದು ನಡೆಯಲಿದ್ದ ಪರೀಕ್ಷೆ ಬರೆಯಲು ವಿವಿ ಅನುಮತಿ ನಿರಾಕರಿಸಿದೆ ಎಂದು ಕಾಲೇಜಿನ ಆಡಳಿತ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಿಫಾ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಎಂದು ವಕೀಲರು ತಿಳಿಸಿದ್ದಾರೆ.