ಶಬರಿಮಲೆಗೆ ಹೊರಟು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ತೃಪ್ತಿ ದೇಸಾಯಿ
ಕೊಚ್ಚಿ, ನ.16: ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರು ಶಬರಿ ಮಲೆ ದೇವಸ್ಥಾನ ಪ್ರವೇಶಿಸಬಹುದೆಂದು ತೀರ್ಪು ನೀಡಿದ ಬಳಿಕ ದೇವಳದ ಬಾಗಿಲು ಇದೀಗ ಮೂರನೇ ಬಾರಿ ತೆರೆದುಕೊಳ್ಳುತ್ತಿದ್ದು, ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ಉದ್ದೇಶದೊಂದಿಗೆ ಶುಕ್ರವಾರ ಮುಂಜಾನೆ ಕೊಚ್ಚಿ ವಿಮಾನ ತಲುಪಿದ್ದಾರೆ. ಆದರೆ ವಿಮಾನ ನಿಲ್ದಾಣದ ಸುತ್ತ ಪ್ರತಿಭಟನೆಕಾರರು ಜಮಾಯಿಸಿದ ಕಾರಣದಿಂದಾಗಿ ಅಲ್ಲಿಂದ ಹೊರಬರಲಾರದೆ ಸಿಲುಕಿಕೊಂಡಿದ್ದಾರೆ.
ಮುಂಜಾನೆ 4:40ಕ್ಕೆ ಪುಣೆಯಿಂದ ತನ್ನ ತಂಡದೊಂದಿಗೆ ವಿಮಾನದಲ್ಲಿ ಆಗಮಿಸಿದ ತೃಪ್ತಿ ದೇಸಾಯಿ ಕೊಚ್ಚಿಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣ ಬಳಿ ಸ್ಥಳೀಯ ಬಿಜೆಪಿ ನೇತೃತ್ವದ ಪ್ರತಿಭಟನೆಕಾರರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.
ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶಿಸುವ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತ ಪಡಿಸಿರುವ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರು, ಯಾವುದೇ ಕಾರಣಕ್ಕೂ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶಿಸಲು ನಾವು ಬಿಡುವುದಿಲ್ಲ, ತಮ್ಮ ಸ್ವಂತ ವಾಹನದಲ್ಲಿ ಅಥವಾ ಪೊಲೀಸ್ ವಾಹನದಲ್ಲಿ ಹೋಗಲಿ ಎಂದು ಹೇಳಿದ್ದಾರೆ.
ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಒಂದು ವೇಳೆ ತನ್ನ ಮೇಲೆ ದಾಳಿ ನಡೆದರೆ ಇದಕ್ಕೆ ಕೇರಳ ಮುಖ್ಯ ಮಂತ್ರಿ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊಣೆಗಾರರಾಗುತ್ತಾರೆ ಎಂದು ತೃಪ್ತಿ ದೇಸಾಯಿ ತಿಳಿಸಿದ್ದಾರೆ.