‘ಭಾರತ್ ಮಾತಾ ಕಿ ಜೈ’ ಎಂದ ಮಾತ್ರಕ್ಕೆ ದೇಶಭಕ್ತಿ ಇದೆ ಎಂದರ್ಥವಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಮುಂಬೈ, ನ.16: ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗಿದ ಮಾತ್ರಕ್ಕೆ ದೇಶಭಕ್ತಿಯಿದೆ ಎಂದರ್ಥವಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಭಾರತದ ಎಲ್ಲಾ 130 ಕೋಟಿ ಜನರ ಉನ್ನತಿಗಾಗಿ ಶ್ರಮಿಸುವುದೇ ನಿಜವಾದ ರಾಷ್ಟ್ರಭಕ್ತಿ ಎಂದು ಅವರು ಜಮ್ನಾಲಾಲ್ ಬಜಾಜ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
“ಚಲನಚಿತ್ರವೊಂದನ್ನು ವೀಕ್ಷಿಸಿ ಭಾರತ್ ಮಾತಾ ಕಿ ಜೈ ಅಥವಾ ಜೈ ಹಿಂದ್ ಎಂದು ಕೂಗುವುದು ದೇಶಭಕ್ತಿಯಲ್ಲ'' ಎಂದು ಹೇಳಿದ ನಾಯ್ಡು, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸುವುದೇ ದೇಶಭಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿಯ ಮಾತುಗಳನ್ನು ಉಲ್ಲೇಖಿಸಿದರು.
ಇಂದಿನ ಆಧುನಿಕ ಯುಗದಲ್ಲೂ ಸ್ವದೇಶೀ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ ಉಪರಾಷ್ಟ್ರಪತಿ ಮಹಾತ್ಮ ಗಾಂಧಿಯವರ ಕರೆಯಂತೆ ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸುವ ಅಗತ್ಯವನ್ನೂ ಒತ್ತಿ ಹೇಳಿದರು.
ಸಮಾಜದಲ್ಲಿ ಮೌಲ್ಯಗಳ ಅದಃಪತನಕ್ಕೆ ಕೂಡು ಕುಟುಂಬ ವ್ಯವಸ್ಥೆ ದೂರವಾಗುತ್ತಿರುವುದೂ ಒಂದು ಕಾರಣ ಎಂದು ಹೇಳಿದ ನಾಯ್ಡು, ನಶಿಸುತ್ತಿರುವ ಮೌಲ್ಯಗಳ ಪುನರುಜ್ಜೀವನಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.
ಮೋದಿ ಆಡಳಿತದಲ್ಲಿ ಪದ್ಮ ಪ್ರಶಸ್ತಿಗಳು ಅಷ್ಟೊಂದು ಖ್ಯಾತಿ ಪಡೆಯದ ಸಾಧಕರಿಗೂ ಸಲ್ಲುತ್ತಿದೆ ಎಂದು ಹೇಳಿದ ನಾಯ್ಡು, ಹಿಂದಿನ ಸರಕಾರದ ಅವಧಿಯಲ್ಲಿ ಪ್ರಶಸ್ತಿಗಳು `ಲುಟ್ಯೆನ್ಸ್ ಝೋನ್'ನವರಿಗೆ ಮಾತ್ರ ಸಲ್ಲುತ್ತಿತ್ತು ಎಂದರು.