ತಾಜ್ ಮಹಲ್ ನಲ್ಲಿ ನಮಾಝ್ ವಿರೋಧಿಸಿ ಪೂಜೆ ಸಲ್ಲಿಸುವುದಾಗಿ ಬೆದರಿಸಿದ ಕೇಸರಿ ಸಂಘಟನೆಗಳು
ಹೊಸದಿಲ್ಲಿ, ನ.16: ಆಗ್ರಾದ ತಾಜ್ ಮಹಲ್ ನಲ್ಲಿ ನಮಾಝ್ ಮಾಡುವ ವಿಚಾರದಲ್ಲಿರುವ ವಿವಾದ ಇದೀಗ ಹೊಸ ತಿರುವು ಪಡೆದಿದ್ದು, ಕೇಸರಿ ಸಂಘಟನೆಗಳು ತಾವು ಶಿವ ದೇವಸ್ಥಾನ ಎಂದು ಪರಿಗಣಿಸುವ ಈ ಸ್ಮಾರಕದಲ್ಲಿ ಪೂಜೆ ನೆರವೇರಿಸುವುದಾಗಿ ಬೆದರಿಕೆ ಹಾಕಿವೆ.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆಕ್ಷೇಪದ ಹೊರತಾಗಿಯೂ ಮಂಗಳವಾರ ಮುಸ್ಲಿಮರು ಇಲ್ಲಿ ನಮಾಝ್ ಮಾಡಿದ್ದಾರೆ. ಇಲ್ಲಿ ಶುಕ್ರವಾರ ಮಾತ್ರ ನಮಾಝ್ ಸಲ್ಲಿಸಬಹುದು, ಉಳಿದ ದಿನಗಳಲ್ಲಿ ಅನುಮತಿಯಿಲ್ಲ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿತ್ತು.
ಆದರೂ ಮಂಗಳವಾರ ನಮಾಝ್ ನಡೆದು ಅದರ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಷ್ಟ್ರೀಯ ಬಜರಂಗದಳ ನಾಯಕ ಗೋವಿಂದ್ ಪರಾಶರ್ ಪ್ರತಿಕ್ರಿಯಿಸಿ ಇದು ತಮ್ಮನ್ನು ಪ್ರಚೋದಿಸುವ ಯತ್ನ, ನಾವು ಮೂಕ ಪ್ರೇಕ್ಷರಾಗಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ ಎಂದಿದ್ದಾರೆ.
``ತೇಜೋಮಹಾಲಯದಲ್ಲಿ ಆರತಿ ನಡೆಸಬೇಕೆಂದು ಕರೆ ನೀಡಿದ್ದಕ್ಕಾಗಿ ನನ್ನನ್ನು ಏಳು ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು ಆದರೆ ನಮಾಝ್ ಸಲ್ಲಿಸಿದವರ ವಿರುದ್ಧ ಕ್ರಮವಿಲ್ಲ, ನಾವು ಕೂಡ ಇಲ್ಲಿ ಪೂಜೆ ನೆರವೇರಿಸುತ್ತೇವೆ. ಇಲ್ಲಿದ್ದ ಶಿವ ದೇವಸ್ಥಾನವನ್ನು ಮೊಘಲ್ ಅರಸರು ಒಡೆದು ತಾಜ್ ಮಹಲ್ ಆಗಿ ಪರಿವರ್ತಿಸಿದ್ದರು,'' ಎಂದು ಅವರು ಹೇಳಿಕೊಂಡರು.
``ನಾವು ಕೂಡ ಸುಪ್ರೀಂ ಕೋರ್ಟ್ ಆದೇಶ ಗೌರವಿಸುತ್ತೇವೆ. ಆದರೆ ಶುಕ್ರವಾರ ಮಾತ್ರ ನಮಾಝ್ ಸಲ್ಲಿಸಬೇಕೆಂಬ ಆದೇಶವಿದ್ದರೂ ಮಂಗಳವಾರವೂ ಸಲ್ಲಿಸಿದ್ದಾರೆ. ಆದರೆ ಅವರ ವಿರುದ್ಧ ಕ್ರಮವಿಲ್ಲ. ಅಲ್ಲಿ ಪೂಜೆ ಸಲ್ಲಿಸುವುದರಿಂದ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ'' ಎಂದಿದ್ದಾರೆ.
ಮಂಗಳವಾರದ ಘಟನೆಯ ಬಳಿಕ ಪುರಾತತ್ವ ಇಲಾಖೆ ಅಧಿಕಾರಿಗಳು ತಾಜ್ ಮಹಲ್ನ ಪೂರ್ವ ಮತ್ತು ಪಶ್ಚಿಮ ಗೇಟುಗಳಲ್ಲಿ ಗಜೆಟ್ ನೋಟಿಫಿಕೇಶನ್ ಅಂಟಿಸಿದರಲ್ಲದೆ ಶುಕ್ರವಾರ ತಾಜ್ ಮಹಲ್ಗೆ ರಜಾ ದಿನವಾಗಿದ್ದರೂ 12ರಿಂದ 2 ಗಂಟೆ ತನಕ ಮಾತ್ರ ನಮಾಝ್ ಗಾಗಿ ತೆರೆಯಲಾಗಿದೆ.