ಆಂಧ್ರದಲ್ಲಿ ಸಿಬಿಐಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದ ಚಂದ್ರಬಾಬು ನಾಯ್ಡು
ವಿಜಯವಾಡ, ನ.16: ಆಂಧ್ರ ಪ್ರದೇಶದಲ್ಲಿರುವ ಕೇಂದ್ರ ಸರಕಾರಿ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಕೇಂದ್ರ ತನಿಖಾ ಏಜನ್ಸಿಗಳಿಗೆ ನೀಡಲಾಗಿದ್ದ ಅನುಮತಿಯನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದೆ.
ಸಿಬಿಐ ಅಧಿಕಾರಿಗಳು ತನಗೆ ಮಾಹಿತಿ ನೀಡದೆ ರಾಜ್ಯದಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಲು ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ (ಡಿಎಸ್ಪಿಇ)ಗೆ ನೀಡಿದ್ದ ಅನುಮತಿಯನ್ನು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಸರಕಾರವು ಹಿಂದೆಗೆದುಕೊಂಡು ಅಧಿಸೂಚನೆಯನ್ನು ಹೊರಡಿಸಿದೆ. ಸಿಬಿಐನ್ನು 1946ರಲ್ಲಿ ಡಿಪಿಎಸ್ಇ ಕಾಯ್ದೆಯಡಿ ರಚಿಸಲಾಗಿತ್ತು.
ರಾಜ್ಯ ಸರಕಾರವು ಅನುಮತಿಯನ್ನು ಹಿಂದೆಗೆದುಕೊಂಡಿರುವುದರಿಂದ ಸಿಬಿಐ ಇನ್ನು ಮುಂದೆ ಆಂಧ್ರಪ್ರದೇಶ ವ್ಯಾಪ್ತಿಯಲ್ಲಿನ ಯಾವುದೇ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ. ಸಿಬಿಐ ಅಧಿಕಾರಿಗಳು ಇತ್ತೀಚಿನ ಹಗರಣಗಳಲ್ಲಿ ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ ತನಗೆ ಆ ಸಂಸ್ಥೆಯಲ್ಲಿ ವಿಶ್ವಾಸವಿಲ್ಲ ಎಂದು ಸರಕಾರವು ಹೇಳಿದೆ.
ರಾಜ್ಯ ಸರಕಾರವು ಇನ್ನು ಮುಂದೆ ಬಗೆಹರಿಯದ ಪ್ರಕರಣಗಳಲ್ಲಿ ಹೆಚ್ಚುವರಿ ತನಿಖೆಗಾಗಿ ಸಿಬಿಐ ಸಂಪನ್ಮೂಲಗಳನ್ನು ನೆಚ್ಚಿಕೊಳ್ಳುವುದಿಲ್ಲ. ಸರಕಾರದ ನಿರ್ಧಾರದಿಂದಾಗಿ ಸಿಬಿಐ ಇನ್ನು ಮುಂದೆ ರಾಜ್ಯದಲ್ಲಿ ದಾಳಿಗಳನ್ನು ನಡೆಸುವಂತಿಲ್ಲ ಮತ್ತು ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಅದರ ಕೆಲಸಗಳನ್ನು ರಾಜ್ಯದ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಕೈಗೊಳ್ಳಬೇಕಾಗುತ್ತದೆ.
ಇಲ್ಲಿ ಮುಖ್ಯವಾದದ್ದೆಂದರೆ ಸರಕಾರದ ನಿರ್ಧಾರವು ಯಾವುದೇ ಶಂಕೆಗಳಿದ್ದಲ್ಲಿ ರಾಜ್ಯದಲ್ಲಿರುವ ಕೇಂದ್ರ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಲು ಎಸಿಬಿಗೆ ಸಾಕಷ್ಟು ಅಧಿಕಾರವನ್ನು ನೀಡುತ್ತದೆ.
2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಪ್ರತಿಪಕ್ಷಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿರುವ ನಾಯ್ಡು ಅವರು ಬಿಜೆಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ತನ್ನ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಕಳೆದ ಕೆಲವು ತಿಂಗಳುಗಳಿಂದ ಆರೋಪಿಸುತ್ತಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿದ್ದಕ್ಕಾಗಿ ರಾಜ್ಯಕ್ಕೆ ಮತ್ತು ತನ್ನ ಸಚಿವರಿಗೆ ಬೆದರಿಕೆಯೊಡ್ಡಲು ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ಕೇಂದ್ರ ಸರಕಾರವು ಬಳಸಿಕೊಳ್ಳುತ್ತಿದೆ ಎಂದು ನಾಯ್ಡು ಪದೇ ಪದೇ ಆರೋಪಿಸಿದ್ದಾರೆ.
ರಾಜಕೀಯ ಪ್ರತೀಕಾರಕ್ಕಾಗಿ ಕೇಂದ್ರವು ಸಿಬಿಐ ಅನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಆಗಾಗ್ಗೆ ಆಪಾದಿಸುತ್ತಲೇ ಇರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಯ್ಡು ಅವರ ನಿರ್ಧಾರವನ್ನು ಬೆಂಬಲಿಸುವ ಮೂಲಕ ತಾನೂ ಇದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬ ಊಹಾಪೋಹಕ್ಕೆ ಕಾರಣರಾಗಿದ್ದಾರೆ.
ಹೆಚ್ಚಿನ ರಾಜ್ಯಗಳು ಸಿಬಿಐ ತಮ್ಮ ವ್ಯಾಪ್ತಿಯಲ್ಲಿ ತನಿಖೆಗಳನ್ನು ನಡೆಸಲು ಸಾಮಾನ್ಯ ಅನುಮತಿಯನ್ನು ನೀಡಿವೆ. ಇದರಿಂದಾಗಿ ಪ್ರತಿಯೊಂದೂ ಪ್ರಕರಣದ ತನಿಖೆಗೆ ಮುನ್ನ ಸಿಬಿಐ ಸಂಬಂಧಿಸಿದ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿಲ್ಲ.
ಆಂಧ್ರಪ್ರದೇಶ ಸರಕಾರದ ಈ ನಿರ್ಧಾರಕ್ಕೆ ಎಷ್ಟರ ಮಟ್ಟಿಗೆ ಕಾನೂನಿ ಬೆಂಬಲವಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಡಿಎಸ್ಪಿಇ ಕಾಯ್ದೆಯ ಕಲಂ 5 ಸಿಬಿಐ ಸೇರಿದಂತೆ ಡಿಎಸ್ಪಿಇಗೆ ಇತರ ರಾಜ್ಯಗಳಲ್ಲಿ ತನಿಖಾಧಿಕಾರವನ್ನು ನೀಡಿದೆ,ಆದರೆ ಕಲಂ 6 ಇಂತಹ ತನಿಖೆಗೆ ಮುನ್ನ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕೆಂದು ಹೇಳುತ್ತದೆ.
ಛತ್ತೀಸ್ಗಡದಲ್ಲಿ ತನಿಖೆ ನಡೆಸಲು ಆ ರಾಜ್ಯ ಸರಕಾರದ ಅನುಮತಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿ ಸಿಬಿಐ ಕಳೆದ ಅ.11ರಂದು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣಗಳಲ್ಲಿ ಸಿಬಿಐ ರಾಜ್ಯದ ಒಪ್ಪಿಗೆಯನ್ನು ಕೋರಬೇಕಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.