ಸಮಾಜದಲ್ಲಿ ಭೀತಿ ಹುಟ್ಟಿಸಲು ದಾಭೋಲ್ಕರ್ ಹತ್ಯೆ: ಸಿಬಿಐ
ಭಯೋತ್ಪಾದನೆ ಆರೋಪದಡಿ ಪ್ರಕರಣ ದಾಖಲು
ಪುಣೆ, ನ.16: ಸಮಾಜದಲ್ಲಿ ಮತ್ತು ಸಾಮಾಜಿಕ ಹೋರಾಟಗಾರರಲ್ಲಿ ಭೀತಿಯ ವಾತಾವರಣ ಮೂಡಿಸುವ ಉದ್ದೇಶದಿಂದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಮಾಡಲಾಗಿದೆ. ಆದ್ದರಿಂದ ಆರೋಪಿಗಳ ವಿರುದ್ಧ ಭಯೋತ್ಪಾದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.
ದಾಭೋಲ್ಕರ್ ಹತ್ಯೆ ಪೂರ್ವಯೋಜಿತ ಮತ್ತು ಸುವ್ಯವಸ್ಥಿತ ಕೃತ್ಯವಾಗಿದ್ದು, ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿರುವುದಾಗಿದೆ. ಆದ್ದರಿಂದ ಆರೋಪಿಗಳ ವಿರುದ್ಧ ಸೆಕ್ಷನ್ 15ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ. ಅಕ್ರಮ ವ್ಯವಹಾರ (ತಡೆ) ಕಾಯ್ದೆಯ ಸೆಕ್ಷನ್ 15(ಭಯೋತ್ಪಾದನೆ ಕೃತ್ಯ) ಮತ್ತು 16(ಭಯೋತ್ಪಾದನೆ ಕೃತ್ಯಕ್ಕೆ ಶಿಕ್ಷೆ)ರಡಿ ಆರೋಪಿಗಳಾದ ಸಚಿನ್ ಅಂದೂರೆ ಹಾಗೂ ಶರದ್ ಕಲಾಸ್ಕರ್ ವಿರುದ್ಧ ಪ್ರಕರಣ ದಾಖಲಿಸಿ ಆರೋಪಪಟ್ಟಿ ದಾಖಲಿಸಲು ಹೆಚ್ಚುವರಿ 90 ದಿನಗಳ ಅವಕಾಶ ನೀಡಬೇಕೆಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಈ ಮನವಿಯನ್ನು ವಿರೋಧಿಸಿದ ಆರೋಪಿ ಪರ ವಕೀಲರು, ದಾಭೋಲ್ಕರ್ ಹತ್ಯೆ ಪ್ರಕರಣಕ್ಕೂ ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೇಳುತ್ತಿರುವ ಸಿಬಿಐ, ಇತರ ಪ್ರಕರಣದಲ್ಲಿ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆರು ಆರೋಪಿಗಳಲ್ಲಿ ಸಚಿನ್ ಮತ್ತು ಶರದ್ ಸೇರಿದಂತೆ ಐವರ ವಿರುದ್ಧ ಆರೋಪಪಟ್ಟಿ ದಾಖಲಿಸಲು ಈ ಹಿಂದೆ ನೀಡಿದ್ದ 90 ದಿನಗಳ ಕಾಲಾವಕಾಶ ನವೆಂಬರ್ 18ಕ್ಕೆ ಅಂತ್ಯಗೊಳ್ಳುತ್ತದೆ. ಆರನೇ ಆರೋಪಿಯ ವಿರುದ್ಧ 2016ರಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ. 2013ರ ಆಗಸ್ಟ್ 20ರಂದು ಪುಣೆಯಲ್ಲಿ ಧಾಬೋಲ್ಕರ್ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದು ಸಚಿನ್ ಮತ್ತು ಶರದ್ ಶೂಟ್ ಮಾಡಿದವರು ಎಂದು ಆರೋಪಿಸಲಾಗಿದೆ.
ಪನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯಲ್ಲೂ ಶಾಮೀಲು
ಸನಾತನ ಸಂಸ್ಥೆ ಅಥವಾ ಹಿಂದು ಜನಜಾಗೃತಿ ಸಮಿತಿ (ಆರೋಪಿಗಳು ಸದಸ್ಯರಾಗಿರುವ ಸಂಘಟನೆ)ಯ ನಂಬಿಕೆ ಮತ್ತು ಸಿದ್ಧಾಂತವನ್ನು ವಿರೋಧಿಸುವವರೊಂದಿಗೆ ಕ್ರೂರವಾಗಿ ವ್ಯವಹರಿಸಲಾಗುವುದು ಎಂಬ ಸಂದೇಶ ಕಳಿಸುವುದು ಕೊಲೆಯ ಹಿಂದಿರುವ ಉದ್ದೇಶವಾಗಿದೆ. ವಿಚಾರವಾದಿ ಗೋವಿಂದ ಪನ್ಸಾರೆ, ಖ್ಯಾತ ವಿದ್ವಾಂಸ ಎಂಎಂ ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲೂ ಆರೋಪಿಗಳು ಶಾಮೀಲಾಗಿದ್ದಾರೆ. ಸನಾತನ ಸಂಸ್ಥೆ/ ಹಿಂದು ಜನಜಾಗೃತಿ ಸಮಿತಿಯ ಸದಸ್ಯರಾಗಿರುವ ಆರೋಪಿಗಳು ಭಯೋತ್ಪಾದಕ ಕೃತ್ಯ ಎಸಗಿರುವ ಕಾರಣ ಇವರ ವಿರುದ್ಧ ‘ಯುಎಪಿಎ’(ಅಕ್ರಮ ಚಟುವಟಿಕೆ ತಡೆ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.