ರಾಹುಲ್ ಭೇಟಿ ಹಿಂದುತ್ವದ ನಾಟಕ: ಬಿಜೆಪಿ ಟೀಕೆ
ಹೊಸದಿಲ್ಲಿ, ನ.16: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ನಾಟಕವಾಡುತ್ತಿದ್ದಾರೆ. ತಾತ್ಕಾಲಿಕ ಜನಿವಾರಧಾರಿ ಬ್ರಾಹ್ಮಣನಾಗಿರುವ ರಾಹುಲ್ ಅವರ ಈ ನಡೆ ಅಸಂಬದ್ಧ ಎಂದು ಬಿಜೆಪಿ ಟೀಕಿಸಿದೆ.
ಇದೇ ಸಂದರ್ಭ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಅವರು ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಸಂಭಾಷಣೆಯ ತುಣುಕನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರಲ್ಲಿ ಮುಸ್ಲಿಮ್ ಮುಖಂಡರ ಗುಂಪೊಂದರ ಜೊತೆ ಮಾತನಾಡುತ್ತಿದ್ದ ಕಮಲನಾಥ್, ಆರೆಸ್ಸೆಸ್ ಬಗ್ಗೆ ಜಾಗರೂಕತೆಯಿಂದ ಇರುವಂತೆ ಅವರಿಗೆ ಎಚ್ಚರಿಕೆ ನೀಡಿದ್ದರಲ್ಲದೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ಪ್ರಕರಣವನ್ನು ನಿಭಾಯಿಸಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಉಲ್ಲೇಖಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಈ ವೀಡಿಯೊ ದೃಶ್ಯಾವಳಿ ಕಾಂಗ್ರೆಸ್ನ ವಿಭಜನವಾದಿ ಮುಖವನ್ನು ಮತ್ತು ತುಷ್ಟೀಕರಣ ನೀತಿಯನ್ನು ಅನಾವರಣಗೊಳಿಸಿದೆ. ಭಾರತದ ಸಮನ್ವಯತೆಯ ಸಂಸ್ಕೃತಿಯನ್ನು ವಿನಾಶಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಬಿಜೆಪಿ ಹಾಗೂ ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ಗೆ ಇರುವ ದ್ವೇಷಭಾವನೆಗೆ ಈ ಹೇಳಿಕೆ ಸಾಕ್ಷಿಯಾಗಿದೆ ಎಂದಿದ್ದಾರೆ.