ಆ್ಯಂಬುಲೆನ್ಸ್ ನಿರಾಕರಣೆ : 2 ವರ್ಷದ ಪುತ್ರನ ಮೃತದೇಹವನ್ನು ಬಸ್ಸಿನಲ್ಲಿ ರಹಸ್ಯವಾಗಿ ಮನೆಗೆ ತಂದ ತಂದೆ
ಶ್ರೀನಗರ್,ನ.17 : ತನ್ನ ಎರಡು ವರ್ಷ ವಯಸ್ಸಿನ ಪುಟ್ಟ ಮಗನ ಮೃತದೇಹವನ್ನು ಕಂಬಳಿಯಲ್ಲಿ ಅಡಗಿಸಿ ಕಿಶ್ಟ್ವರ್ ಎಂಬಲ್ಲಿಂದ ಜಮ್ಮು ತನಕ ಬರೋಬ್ಬರಿ 220 ಕಿಮೀ ದೂರ ತಂದೆಯೊಬ್ಬ ಬಸ್ಸಿನಲ್ಲಿ ಪಯಣಿಸಿದ ದಾರುಣ ಘಟನೆ ವರದಿಯಾಗಿದೆ. ಮಗುವನ್ನು ದಾಖಲಿಸಿದ್ದ ಆಸ್ಪತ್ರೆಯಲ್ಲಿ ಮೃತದೇಹವನ್ನು ಸಾಗಿಸಲು ಅಂಬುಲೆನ್ಸ್ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಕೂಲಿ ಕಾರ್ಮಿಕ ಮುಹಮ್ಮದ್ ಸುಲ್ತಾನ್ ತನ್ನ ಪುತ್ರ ಮನನ್ ಮೃತದೇಹವನ್ನು ಜಮ್ಮುವಿನ ಆಸ್ಪತ್ರೆಯಿಂದ ಮನೆಗೆ ಬಸ್ಸಿನಲ್ಲಿ ರಹಸ್ಯವಾಗಿ ಸಾಗಿಸಬೇಕಾಯಿತು.
ಗುರುವಾರ ಬೆಳಿಗ್ಗೆ ತನ್ನ ಗ್ರಾಮವಾದ ಕುಚ್ಚಲ್ನಲ್ಲಿನ ಮನೆಯಲ್ಲಿದ್ದ ಮಗು ತೀರಾ ಅನಾರೋಗ್ಯದಿಂದಿದ್ದಂತೆ ಕಂಡು ಬಂದಿದ್ದರಿಂದ ಕೂಡಲೇ ಕಿಶ್ಟ್ವರ್ ಎಂಬಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಯಿತಾದರೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಿದ್ದಂತೆ ಜಮ್ಮುವಿನ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಲಾಯಿತು.
ಸ್ಥಳೀಯ ಸ್ವಯಂ ಸೇವಾ ಸಂಘಟನೆ ಅಬಬೀಲ್ ಅನ್ನು ಕುಟುಂಬ ಸಂಪರ್ಕಿಸಿದಾಗ ಅದು ಜಿಲ್ಲಾಧಿಕಾರಿ ಅಂಗ್ರೇಝ್ ಸಿಂಗ್ ರಾನಾಗೆ ಮನವಿ ಸಲ್ಲಿಸಿ ತುರ್ತು ಚಿಕಿತ್ಸಾ ಅಂಬುಲೆನ್ಸ್ ಒದಗಿಸುವಂತೆ ಕೋರಿತ್ತು. ಅದರೆ ಅಲ್ಲಿ ಡಿಸಿ ಸಹಿತ ಅವರ ಕಿರಿಯ ಅಧಿಕಾರಿಗಳು ಅಂಬುಲೆನ್ಸ್ ಒದಗಿಸಲು ನಿರಾಕರಿಸಿದ್ದೇ ಅಲ್ಲದೆ ಯಾರೂ ನ್ಯುಮೋನಿಯಾದಿಂದ ಸಾಯುವುದಿಲ್ಲ ಎಂಬ ಮಾತುಗಳನ್ನೂ ಕುಟುಂಬ ಕೇಳಬೇಕಾಯಿತು ಎಂದು ಆರೋಪಿಸಲಾಗಿದೆ. ನಂತರ ಸಂಘಟನೆ ದೇಣಿಗೆ ಸಂಗ್ರಹಿಸಿ ಸಾಮಾನ್ಯ ಅಂಬುಲೆನ್ಸ್ ನಲ್ಲಿ ಮಗುವನ್ನು ಜಮ್ಮುವಿಗೆ ಸಾಗಿಸಲಾಯಿತಾದರೂ ವೈದ್ಯರಿಗೆ ಮಗುವಿನ ಜೀವವುಳಿಸಳು ಸಾಧ್ಯವಾಗಿಲ್ಲ. ನಂತರ ಕುಟುಂಬ ಅನಿವಾರ್ಯವಾಗಿ ಬಸ್ಸಿನಲ್ಲಿ ಅಲ್ಲಿಂದ ಊರಿಗೆ ಮರಳಿದಾಗ ಸುದ್ದಿ ತಿಳಿದ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಧಿಕಾರಿ ಸರಿಯಾದ ಸಮಯದಲ್ಲಿ ತುರ್ತು ಸೇವಾ ಅಂಬುಲೆನ್ಸ್ ಒದಗಿಸಿದ್ದರೆ ಮಗುವಿನ ಜೀವ ಉಳಿಸಬಹುದಾಗಿತ್ತು ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಬೇಕೆಂಬ ಬೇಡಿಕೆಯನ್ನೂ ಪ್ರತಿಭಟನಾಕಾರರು ಮುಂದಿಟ್ಟರು. ಕೊನೆಗೆ ಪ್ರಕರಣದ ತನಿಖೆ ನಡೆಸುವುದಾಗಿ ತಹಸೀಲ್ದಾರ್ ತಿಳಿಸಿದ ನಂತರ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಯಿತು.