ಪರಿತ್ಯಕ್ತ ಮಾಜಿ ಗೆಳೆಯನನ್ನು ಸೇರಲು ಮಹಿಳೆಯರಿಂದ ರೇಪ್ ಆರೋಪ
ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದಾತ್ಮಕ ಹೇಳಿಕೆ
ಚಂಡೀಗಡ, ನ.18: ಪರಿತ್ಯಕ್ತ ಮಾಜಿ ಗೆಳೆಯನನ್ನು ಸೇರಲು ಕೆಲವು ಮಹಿಳೆಯರು ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತಾರೆ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿಕೆ ನೀಡುವ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಖಟ್ಟರ್ ಇತ್ತೀಚೆಗೆ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂಬ ವರದಿಯನ್ನು ನಿರಾಕರಿಸಿದರು. ಅತ್ಯಾಚಾರ ಈ ಹಿಂದೆಯೂ ನಡೆಯುತ್ತಿತ್ತು. ಈಗ ಕೂಡ ನಡೆಯುತ್ತಿದೆ. ಈ ಪ್ರಕರಣ ಹೆಚ್ಚುತ್ತಿರುವುದು ಚಿಂತೆಯ ವಿಚಾರವಾಗಿದೆ. ಸುಮಾರು 80 ರಿಂದ 90 ಶೇ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪರಸ್ಪರ ಪರಿಚಿತರ ನಡುವೆಯೇ ನಡೆಯುತ್ತದೆ. ಇಬ್ಬರು ಕೆಲವು ಸಮಯ ಒಟ್ಟಿಗೆ ಓಡಾಡುತ್ತಾರೆ. ಅಂತಿಮವಾಗಿ ಒಂದು ದಿನ ದುರ್ಬಳಕೆ ಮಾಡಿದಾಗ ಮಹಿಳೆ ಎಫ್ಐಆರ್ ದಾಖಲಿಸಿ ತಾನು ಅತ್ಯಾಚಾರಕ್ಕೀಡಾಗಿದ್ದೇನೆ ಎಂದು ಹೇಳುತ್ತಾಳೆೆ’’’ ಎಂದು ಖಟ್ಟರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹರ್ಯಾಣ ಸಿಎಂ ಹೇಳಿಕೆಯನ್ನು ಖಂಡಿಸಿದ್ದಾರೆ. ‘‘ಖಟ್ಟರ್ ಸರಕಾರದ ಮಹಿಳಾ ವಿರೋಧಿ ಮನಸ್ಥಿತಿ ಇದೀಗ ಬಯಲಾಗಿದೆ. ಹರ್ಯಾಣದ ಮುಖ್ಯಮಂತ್ರಿ ಖಟ್ಟರ್ ಖಂಡನಾರ್ಹ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರವನ್ನು ತಡೆಯಲು ಸಂಪೂರ್ಣ ವಿಫಲವಾಗಿರುವ ಅವರು ಮಹಿಳೆಯರ ಮೇಲೆ ಗೂಬೆ ಕೂರಿಸುತ್ತಿದ್ದಾರೆ’’ ಎಂದರು.