ನಕಲಿ ಎನ್ಕೌಂಟರ್ ಪ್ರಕರಣ: ಹರ್ಯಾಣ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ, ನ.18: ಉದ್ಯಮಿಯನ್ನು ಅಪಹರಿಸಿದ ಆರೋಪಿ ಹಾಗೂ ಆತನ ಸ್ನೇಹಿತೆಯನ್ನು ಪೊಲೀಸರು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದು ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಹರ್ಯಾನ ಸರಕಾರಕ್ಕೆ ಹಾಗೂ ಹರ್ಯಾಣದ ಡಿಜಿಪಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. 2014ರ ಜುಲೈ 8ರಂದು 26 ವರ್ಷದ ರಾಜಕುಮಾರ್ ಎಂಬಾತನನ್ನು ಆತನ ಸ್ನೇಹಿತೆ ಜ್ಯೋತಿ ಎಂಬಾಕೆಯ ಸಹಿತ ಹರ್ಯಾಣದ ರೋಹ್ಟಕ್ನ ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿದ್ದರು. ದಿಲ್ಲಿ ಪೊಲೀಸ್ ಇಲಾಖೆಯ 16 ಸಿಬ್ಬಂದಿಗಳೂ ಎನ್ಕೌಂಟರ್ನಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಲಾಗಿದೆ.
ನೈರುತ್ಯ ದಿಲ್ಲಿಯ ನಜಾಫ್ಗಡದ ವ್ಯಾಪಾರಿ ರಾಮಲಾಲ್ ತ್ಯಾಗಿ ಎಂಬಾತನನ್ನು ರಾಜಕುಮಾರ್ ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ನಕಲಿ ಎನ್ಕೌಂಟರ್ ಆಗಿದ್ದು ಹತ್ಯೆಯಾದ ಸಂದರ್ಭ ತನ್ನ ಮಗ ಅಥವಾ ಆತನ ಸ್ನೇಹಿತೆಯ ಬಳಿ ಯಾವುದೇ ಆಯುಧಗಳಿರಲಿಲ್ಲ ಎಂಬುದು ರಾಜ್ಯ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಆದ್ದರಿಂದ ಪೊಲೀಸರು ಗುಂಡು ಹಾರಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿರುವ ರಾಜಕುಮಾರ್ನ ತಂದೆ ಸತ್ಬೀರ್ ಸಿಂಗ್, ಎನ್ಕೌಂಟರ್ ವಿರುದ್ಧ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು.