ಮಧ್ಯಪ್ರದೇಶ ಸಿಎಂ ಆಪ್ತರ ವಿರುದ್ಧ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ನಿಗೂಢ ಸಾವು
ಭೋಪಾಲ್, ನ.19: ಬಿಜೆಪಿಯ ಪ್ರಭಾವಿ ಶಾಸಕ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರ ಆಪ್ತರ ವಿರುದ್ಧ ದೂರು ನೀಡಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಮನೋಜ್ ತ್ರಿಪಾಠಿ ರವಿವಾರ ನಿಗೂಢ ಸಾವನ್ನಪ್ಪಿದ್ದಾರೆ.
ತಮ್ಮ ಮನೆಯ ಟೆರೇಸ್ನಿಂದ ಬಿದ್ದು ಅವರು ಪ್ರಾಣ ಕಳೆದುಕೊಂಡಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ತ್ರಿಪಾಠಿ ಕುಟುಂಬ ಆಪಾದಿಸಿದೆ. ಕೊಲಾರ್ ಪ್ರದೇಶದ ಸರ್ವಧಾಮ ಕಾಲನಿಯ ಬಿ ಸೆಕ್ಟರ್ನ ದ್ವಾರಕ ಹೈಟ್ಸ್ನಲ್ಲಿ ತ್ರಿಪಾಠಿ ವಾಸವಿದ್ದರು. ನವೆಂಬರ್ 2ರಂದು ಟೆರೇಸ್ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಅವರಿಗೆ ಎರಡು ವಾರಗಳ ಕಾಲ ಜೀವರಕ್ಷಕ ವ್ಯವಸ್ಥೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರವಿವಾರ ಅವರು ಕೊನೆಯುಸಿರೆಳೆದಿದ್ದಾರೆ.
ಕುಟುಂಬದವರು ಹೇಳುವ ಪ್ರಕಾರ, ಮನೋಜ್ ಫೋನ್ನಲ್ಲಿ ಮಾತನಾಡುವ ಸಲುವಾಗಿ ನವೆಂಬರ್ 2ರಂದು ರಾತ್ರಿ ಟೆರೇಸ್ಗೆ ತೆರಳಿದ್ದರು. ಅವರು ಬಿದ್ದ ಸ್ಥಳಕ್ಕೆ ನಾವು ಧಾವಿಸಿದಾಗ ಪಕ್ಕದಲ್ಲಿ ಮೂರು ನಾಲ್ಕು ಮಂದಿ ಪೊಲೀಸರು ನಿಂತಿದ್ದರು ಎಂದು ತ್ರಿಪಾಠಿ ಅವರ ಸಂಬಂಧಿ ಅಂಜನಿ ಪಾಂಡೆ ಹೇಳಿದ್ದಾರೆ. ಅವರು ತಾವಾಗಿಯೇ ಬಿದ್ದರೇ ಅಥವಾ ಕಟ್ಟಡದ ಮೇಲಿಂದ ಅವರನ್ನು ತಳ್ಳಲಾಗಿದೆಯೇ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ತ್ರಿಪಾಠಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ತ್ರಿಪಾಠಿ ಬಿದ್ದ ಹಿಂದಿನ ದಿನ ಅವರು, ಮಧ್ಯಪ್ರದೇಶ ಬಿಜೆಪಿ ಉಪಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ರಾಮೇಶ್ವರ್ ಶರ್ಮಾ ವಿರುದ್ಧ ದೂರು ನೀಡಿದ್ದರು. ಭಾರತದ ಚುನಾವಣಾ ಆಯುಕ್ತ, ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿ, ಶಾಸಕರು 7,000 ಚದರ ಅಡಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಟ್ಟಡ ನಿರ್ಮಿಸಿದ್ದಾರೆ ಎಂದು ಆಪಾದಿಸಿದ್ದರು.
ಇದಕ್ಕೂ ಮುನ್ನ ಮಧ್ಯಪ್ರದೇಶ ಸಾರ್ವಜನಿಕ ಸಂಪರ್ಕ ನಿರ್ದೆಶನಾಲಯದ ಹಿರಿಯ ಐಎಎಸ್ ಅಧಿಕಾರಿಗಳಾದ ಎಸ್.ಕೆ.ಮಿಶ್ರಾ, ಮಂಗಲ ಮಿಶ್ರ, ಅನುಪಮ್ ರಾಜನ್ ಹಾಗೂ ಅನಿಲ್ ಮಾಥುರ್ ವಿರುದ್ಧವೂ ದೂರು ನೀಡಿದ್ದರು. ಮಿಶ್ರಾ ಅವರು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ. ಸುಳ್ಳು ಸುದ್ದಿ ಹರಡುವ ವೆಬ್ಸೈಟ್ಗಳಿಗೆ ಜಾಹೀರಾತು ನೀಡುವ ಮೂಲಕ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆಪಾದಿಸಿದ್ದರು.
ತ್ರಿಪಾಠಿ ನಿಗೂಢ ಸಾವಿನ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿ ಸುನೀಲ್ ಶರ್ಮಾ ಅವರನ್ನು ಕೇಳಿದಾಗ, "ಅವರು ಮದ್ಯಪಾನ ಮಾಡಿ, ಟೆರೇಸ್ನಿಂದ ಬಿದ್ದು ಸತ್ತಿದ್ದಾರೆ. ಅವರ ಸಾವಿನ ವಿಚಾರದಲ್ಲಿ ಯಾವ ಸಂಶಯವೂ ಇಲ್ಲ" ಎಂದು ಸ್ಪಷ್ಟಪಡಿಸಿದರು. ಆದರೆ ಮತ್ತಷ್ಟು ಪ್ರಶ್ನಿಸಿದಾಗ, "ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲಾರೆ; ಮರಣೋತ್ತರ ಪರೀಕ್ಷೆ ವರದಿಗೆ ಕಾಯಬೇಕು" ಎಂದು ಪ್ರತಿಕ್ರಿಯಿಸಿದರು.
ಹಲವು ಇಲಾಖೆಗಳ ಅವ್ಯವಹಾರದ ಬಗ್ಗೆ ಹೋರಾಡುತ್ತಿದ್ದ ಅವರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಈ ಸಾವಿನ ಹಿಂದೆ ಯಾರದೋ ಕೈವಾಡ ಅಡಗಿದೆ ಎಂಬ ಶಂಕೆಯನ್ನು ಭೋಪಾಲ್ ಮೂಲದ ಕಾರ್ಯಕರ್ತ ಅಜಯ್ ದುಬೆ ವ್ಯಕ್ತಪಡಿಸಿದ್ದಾರೆ.