ಜಮ್ಮು-ಕಾಶ್ಮೀರ ಅಸೆಂಬ್ಲಿ ವಿಸರ್ಜನೆ
ಪಿಡಿಪಿ-ಕಾಂಗ್ರೆಸ್-ಎನ್ಸಿ ಮೈತ್ರಿ ಸರಕಾರ ರಚನೆ ವಿಫಲ
ಶ್ರೀನಗರ, ನ.21: ಜಮ್ಮುಕಾಶ್ಮೀರದ ರಾಜಕೀಯದಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಹಾಗೂ ಪೀಪಲ್ಸ್ ಕಾನ್ಫರೆನ್ಸ್ ನ ನಾಯಕ ಸಜ್ಜದ್ ಲೋನ್ ಸರಕಾರ ರಚಿಸುವುದಕ್ಕೆ ಬುಧವಾರ ಪ್ರತ್ಯೇಕವಾಗಿ ಹಕ್ಕು ಮಂಡಿಸಿದ್ದರಾದರೂ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇಬ್ಬರಿಗೂ ಅವಕಾಶ ನೀಡದೇ ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ದಿಢೀರ್ ವಿಸರ್ಜಿಸಿದ್ದಾರೆ.
ಈ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ವಿಧಾನಸಭೆ ವಿಸರ್ಜನೆ ಕುರಿತು ಆದೇಶ ಹೊರಡಿಸಲಾಗಿದ್ದು, ಸರಕಾರ ರಚನೆಗೆ ಶತ ಪ್ರಯತ್ನ ನಡೆಸುತ್ತಿದ್ದ ಕಾಂಗ್ರೆಸ್-ಪಿಡಿಪಿ-ಎನ್ಸಿ ಪಕ್ಷಗಳಿಗೆ ಭಾರೀ ಹಿನ್ನಡೆಯುಂಟಾಗಿದೆ.
ಉಮರ್ ಅಬ್ದುಲ್ಲ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಬಾಹ್ಯಬೆಂಬಲ ಪಡೆದು ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ರಚಿಸುವುದಕ್ಕೆ ತನಗೆ ಅವಕಾಶ ನೀಡಬೇಕೆಂದು ಕೋರಿ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಇಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದೇ ವೇಳೆಗೆ ಪೀಪಲ್ಸ್ ಕಾನ್ಫರೆನ್ಸ್ನ ಸಜ್ಜದ್ ಲೋನೆ ಸಹ ತಮ್ಮ ಬಳಿ ಸರಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶವನ್ನು ನ್ಯಾಷನಲ್ ಕಾನ್ಫರೆನ್ಸ್ ಸ್ವಾಗತಿಸಿದೆ.
ವಿಧಾನಸಭೆಯಲ್ಲಿ ಸರಕಾರ ರಚನೆಗೆ ಬಹುಮತಕ್ಕೆ 44 ಸ್ಥಾನಗಳು ಅಗತ್ಯವಿದೆ. ವಿಸರ್ಜಿತ ವಿಧಾನಸಭೆಯಲ್ಲಿ ಬಿಜೆಪಿ 25, ಪಿಡಿಪಿ 28, ಎನ್ಸಿ 15 ಮತ್ತು ಕಾಂಗ್ರೆಸ್ 12, ಸಿಪಿಎಂ 1 ಹಾಗೂ ಇತರರು 8 ಸ್ಥಾನಗಳನ್ನು ಹೊಂದಿದ್ದರು. ಬಿಜೆಪಿಯ ಮಿತ್ರ ಹಾಗೂ ಪೀಪಲ್ಸ್ ಕಾನ್ಫರೆನ್ಸ್(ಪಿಸಿ)ನ ಅಧ್ಯಕ್ಷ ಸಜ್ಜದ್ ಲೋನೆ ಅವರು ಬಿಜೆಪಿ ಮತ್ತು ಪಿಡಿಪಿ ಭಿನ್ನಮತೀಯರ ನೆರವಿನಿಂದ ತೃತೀಯ ರಂಗವೊಂದನ್ನು ಹುಟ್ಟುಹಾಕಿ ಸರಕಾರ ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಬಿಜೆಪಿಯು ಪಿಡಿಪಿಗೆ ಬೆಂಬಲವನ್ನು ಹಿಂದೆಗೆದುಕೊಂಡ ಮತ್ತು ಮುಖ್ಯಮಂತ್ರಿ ಮೆಹಬೂಬ ರಾಜೀನಾಮೆ ನೀಡಿದ ಬಳಿಕ ಕಳೆದ ಜೂನ್ನಲ್ಲಿ ರಾಜ್ಯದಲ್ಲಿ ಎಂಟನೇ ಬಾರಿಗೆ ರಾಷ್ಟ್ರಪತಿ ಆಡಳಿತವು ಜಾರಿಗೊಂಡಿತ್ತು.