ಚುನಾವಣಾ ಪ್ರಚಾರ: ಮತದಾರರ ಕೈಗೆ ಚಪ್ಪಲಿ ನೀಡುತ್ತಿದ್ದಾರೆ ಈ ಅಭ್ಯರ್ಥಿ !
ಕಾರಣವೇನು ಗೊತ್ತಾ ?
ಹೈದರಾಬಾದ್, ನ. 23: ತೆಲಂಗಾಣ ವಿಧಾನ ಸಭೆ ಚುನಾವಣೆಯ ಪ್ರಚಾರ ತೀವ್ರಗೊಂಡಿದೆ. ಮತದಾರರನ್ನು ಸೆಳೆಯಲು ಪಕ್ಷಗಳ ಅಭ್ಯರ್ಥಿಗಳು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಕೊರುಟ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಕುಲ್ ಹನುಮಂತ್ ವಿಭಿನ್ನ ದಾರಿಯನ್ನು ಕಂಡು ಕೊಂಡಿದ್ದಾರೆ.
ಅವರು ಮನೆ ಮನೆಗೆ ತೆರಳಿ ಚಪ್ಪಲಿ ನೀಡಿ ಮತ ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸದೇ ಇದ್ದರೆ, ಇದೇ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಅವರು ದಿನಾಂಕ ಇಲ್ಲದ ರಾಜೀನಾಮೆ ಪತ್ರವನ್ನು ಕೂಡ ಮತದಾರರಿಗೆ ತೋರಿಸುತ್ತಿದ್ದಾರೆ. ನೀಡಿದ ಭರವಸೆ ಈಡೇರಿಸಲು ವಿಫಲವಾದರೆ ಪದತ್ಯಾಗ ಮಾಡಿ ಜನರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇನೆ ಎಂದು ಕೂಡ ಹೇಳುತ್ತಿದ್ದಾರೆ. ಕೊರುಟ್ಲಾ ಕ್ಷೇತ್ರದಲ್ಲಿ ಮೂರು ಬಾರಿ ವಿಜಯಿಯಾಗಿರುವ ಟಿಆರ್ಎಸ್ ಅಭ್ಯರ್ಥಿ ಕೆ. ವಿದ್ಯಾಸಾಗರ್ ರಾವ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಹನುಮಂತ್ ಸ್ಪರ್ಧಿಸುತ್ತಿದ್ದಾರೆ. 119 ವಿಧಾನ ಸಭಾ ಸ್ಥಾನಕ್ಕೆ ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 11ರಂದು ನಡೆಯಲಿದೆ.