ಅಯೋಧ್ಯೆಗೆ ಶಿವಸೇನೆ, ವಿಎಚ್ಪಿ ಕಾರ್ಯಕರ್ತರ ದೌಡು: ಕಟ್ಟೆಚ್ಚರ ಘೋಷಣೆ
ಶಾಂತಿ ನೆಲೆಸುವಂತೆ ಮಾಡಲು ಸೇನೆಯನ್ನು ನಿಯೋಜಿಸಿ: ಅಖಿಲೇಶ್ ಯಾದವ್
ಮುಂಬೈ, ನ.24: ಮುಂಬರುವ ಲೋಕಸಭಾ ಚುನಾವಣೆ ಮೊದಲೇ ರಾಮಮಂದಿರ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರಲು ಹಾಗೂ ಶಕ್ತಿ ಪ್ರದರ್ಶಿಸಲು ಶಿವಸೇನೆ ಹಾಗೂ ವಿಎಚ್ಪಿ ಕಾರ್ಯಕರ್ತರು ಅಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಯೋಧ್ಯೆಗೆ ಎರಡು ದಿನಗಳ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಶುಕ್ರವಾರ ರಾತ್ರಿಯಿಂದ ಐದು ರೈಲುಗಳಲ್ಲಿ ಮಹಾರಾಷ್ಟ್ರದಿಂದ ಅಯೋಧ್ಯೆಗೆ ಬರುತ್ತಿದ್ದಾರೆ. ಸೋಮವಾರ ನಡೆಯಲಿರುವ ಧರ್ಮಸಭಾದಲ್ಲಿ 1 ಲಕ್ಷ ಕಾರ್ಯಕರ್ತರು ಹಾಜರಾಗಲಿದ್ದಾರೆಂದು ವಿಎಚ್ಪಿ ನಿರೀಕ್ಷೆ ಮಾಡುತ್ತಿದೆ.
ಫೈಝಾಬಾದ್ ಜಿಲ್ಲಾಡಳಿತ ರಾಮಮಂದಿರ-ಬಾಬ್ರಿ ಮಸೀದಿ ವಿವಾದಿತ ಸ್ಥಳದಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಿದೆ. ಅಸುರಕ್ಷಿತ ಭಾವನೆ ಉಂಟಾಗುತ್ತಿರುವ ಕಾರಣ ಹಿಂಸಾಚಾರದ ಭೀತಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯವರು ನಗರವನ್ನು ತೊರೆಯಲಾರಂಭಿಸಿದ್ದಾರೆ ಂದು ವರದಿಯಾಗಿದೆ.
ರಾಜ್ಯ ಪೊಲೀಸರು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.ಸರಕಾರವು ಎಡಿಜಿ(ಲಕ್ನೋ ವಲಯ) ಅಶುತೋಶ್ ಪಾಂಡೆ ಹಾಗೂ ಐಜಿ(ಜಾನ್ಸಿ)ಎಸ್ಎಸ್ ಬೆಲ್ರನ್ನು ಭದ್ರತೆಯ ಮೇಲುಸ್ತುವಾರಿ ವಹಿಸಲು ನಿಯೋಜಿಸಿದೆ.
ಸುಪ್ರೀಂಕೋರ್ಟ್ ಅಯೋಧ್ಯೆಯ ಪರಿಸ್ಥಿತಿಯ ಮೇಲೆ ನಿಗಾವಹಿಸಬೇಕು. ಶಾಂತಿ ನೆಲೆಸುವಂತೆ ಮಾಡಲು ಸೇನೆಯನ್ನು ನಿಯೋಜಿಸಿ ಜನತೆಗೆ ಭದ್ರ್ರತೆ ಒದಗಿಸಬೇಕೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.