ಕಾರ್ತರ್ಪುರ್ ಕಾರಿಡಾರ್ಗೆ ಪಾಕಿಸ್ತಾನದ ಆಹ್ವಾನ ತಿರಸ್ಕರಿಸಿದ ಸುಷ್ಮಾ ಸ್ವರಾಜ್
ಹೊಸದಿಲ್ಲಿ, ನ. 25: ಸಿಕ್ಖ್ ಯಾತ್ರಾರ್ಥಿಗಳಿಗಾಗಿರುವ ಕಾರ್ತರ್ಪುರ್ ಕಾರಿಡಾರ್ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಭೇಟಿ ನೀಡಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನಿರಾಕರಿಸಿದ್ದಾರೆ. ಆದರೆ, ಅವರ ಸಂಪುಟದ ಇಬ್ಬರು ಸಹೋದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಬಾದಲ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರನ್ನು ಕಳುಹಿಸಿಕೊಡಲಿದೆ ಎಂದು ಸುಷ್ಮಾ ಸ್ವರಾಜ್ ಅವರ ಕಚೇರಿ ತಿಳಿಸಿದೆ. ನವೆಂಬರ್ 28ರಂದು ನಡೆಯಲಿರುವ ಕಾರ್ತರ್ಪುರ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧುಗೆ ಆಹ್ವಾನ ನೀಡಲಾಗಿದೆ ಎಂದು ಈ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮಹಮ್ಮೂದ್ ಖುರೇಶಿ ಟ್ವೀಟ್ ಮಾಡಿದ್ದರು.
ಖುರೇಶಿ ಅವರಿಗೆ ಬರೆದ ಪತ್ರದಲ್ಲಿ ಸುಷ್ಮಾ ಸ್ವರಾಜ್ ಆಹ್ವಾನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಹಲವು ಬದ್ಧತೆ ಇರುವ ಕಾರಣಕ್ಕೆ ಕಾರ್ತರ್ಪುರ ಸಾಹೀಬ್ಗೆ ಪ್ರಯಾಣಿಸಲು ಸಾಧ್ಯವಾಗಲಾರದು ಎಂದಿದ್ದಾರೆ. ನಮ್ಮ ಸಿಕ್ಖ್ ನಾಗರಿಕ ಭಾವನೆಗಳು ಹಾಗೂ ಅವರಿಗೆ ಪವಿತ್ರ ಗುರುದ್ವಾರದ ಕಾರ್ತರ್ಪುರ ಸಾಹಿಬ್ ಸೌಲಭ್ಯ ದೊರೆಯಲಿ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಂಡು ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಸಚಿವರಾದ ಹರ್ಸಿಮ್ರಾತ್ ಕೌರ್ ಬಾದಲ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರನ್ನು ಭಾರತದ ಪ್ರತಿನಿಧಿಗಳಾಗಿ ಕಳುಹಿಸಿ ಕೊಡಲಿದೆ ಎಂದು ಸುಷ್ಮಾ ಸ್ವರಾಜ್ ಪತ್ರದಲ್ಲಿ ಹೇಳಿದ್ದಾರೆ.