ಆದಿತ್ಯನಾಥ್ ಗೆ ಧೈರ್ಯವಿದ್ದರೆ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಪರ ಮತಯಾಚಿಸಲಿ: ಸಚಿನ್ ಪೈಲಟ್ ಸವಾಲು
ಜೈಪುರ, ಡಿ.2: ರಾಜಸ್ಥಾನದ ಟಾಂಕ್ ವಿಧಾನಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ವಿರುದ್ಧ ಬಿಜೆಪಿ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸಿದೆ. ಹಾಲಿ ಶಾಸಕ ಅಜಿತ್ ಸಿಂಗ್ ಮೆಹ್ತಾ ಅವರಿಗೆ ಟಿಕೆಟ್ ಘೋಷಿಸಿದ್ದ ಬಿಜೆಪಿ, ಕೊನೆ ಕ್ಷಣದಲ್ಲಿ ಸಚಿವ ಯೂನುಸ್ ಖಾನ್ ಅವರನ್ನು ಕಣಕ್ಕೆ ಇಳಿಸಿದೆ.
55 ಸಾವಿರ ಮುಸ್ಲಿಂ ಮತಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ರಣತಂತ್ರದ ಬಗ್ಗೆ ಪೈಲಟ್ ಅವರನ್ನು ಕೇಳಿದಾಗ, "ಆದಿತ್ಯನಾಥ್ ಧೈರ್ಯವಿದ್ದರೆ ಕ್ಷೇತ್ರಕ್ಕೆ ಬಂದು ತಮ್ಮ ಏಕೈಕ ಮುಸ್ಲಿಂ ಅಭ್ಯರ್ಥಿಯ ಪರವಾಗಿ ಮತ ಯಾಚಿಸಲಿ" ಎಂದು ಸವಾಲು ಹಾಕಿದರು. ಆದಿತ್ಯನಾಥ್ ಹಾಗೆ ಮಾಡಲು ಸಾಧ್ಯವೇ ಇಲ್ಲ; ಏಕೆಂದರೆ ಮುಸ್ಲಿಮರಿಗಾಗಿ ಅವರಾಗಲೀ, ಅವರ ಪಕ್ಷವಾಗಲೀ ಏನನ್ನೂ ಮಾಡಿಲ್ಲ. ಕೇವಲ ಮಸೀದಿ ಮಂದಿರ ರಾಜಕೀಯದಲ್ಲಿ ತೊಡಗಿದೆ ಎಂದು ಸಚಿನ್ ಟೀಕಿಸಿದ್ದಾರೆ.
ಈ ಮಧ್ಯೆ ಅಲಂಕೃತ ರಥದಲ್ಲಿ ಹಳ್ಳಿಹಳ್ಳಿಗೆ ತೆರಳುತ್ತಿರುವ ಸಚಿನ್ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. "ನಮ್ಮ ಮುಖ್ಯಮಂತ್ರಿ ಈ ಕ್ಷೇತ್ರದಿಂದ ಆಯ್ಕೆಯಾಗಬೇಕು ಎನ್ನುವುದು ನಮ್ಮ ಬಯಕೆ. ನಾವು ಸಚಿನ್ ಹಾಗೂ ಕಾಂಗ್ರೆಸ್ಗೆ ಮತ ಹಾಕುತ್ತೇವೆ" ಎಂದು ಕ್ಷೇತ್ರದ ಲಕ್ಷ್ಮೀನಾರಾಯಣ ಭೈರವ ಹೇಳುತ್ತಾರೆ.
"ಪೈಲಟ್ 50 ಸಾವಿರಕ್ಕೂ ಅಧಿಕ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗಿದೆ. ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರು ಆ ಪಕ್ಷಕ್ಕೆ ಮತ ಹಾಕುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಖಾನ್ ಅವರಾಗಲೀ, ಅವರ ಪಕ್ಷವಾಗಲೀ ಟಾಂಕ್ ನಲ್ಲಿ ಮುಸ್ಲಿಮರ ಪರವಾಗಿ ಏನೂ ಮಾಡಿಲ್ಲ" ಎಂದು ಶಾಹಿ ಜಾಮಾ ಮಸೀದಿಯ ವಕ್ತಾರ ಮೊಯೀನುಲ್ಲಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.