ಉದ್ಯಮಿಯನ್ನು ಲಾಕಪ್ಗೆ ತಳ್ಳಿದ ಪೊಲೀಸರ ಕಳಪೆ ಇಂಗ್ಲಿಷ್!
ಪಾಟ್ನಾ, ಡಿ.3: ವಿಚ್ಛೇದನ ಪ್ರಕರಣದಲ್ಲಿ ಸ್ವೀಟ್ಮೀಟ್ ವ್ಯಾಪಾರಿಯೊಬ್ಬರಿಗೆ ಕೋರ್ಟ್ ನೀಡಿದ ವಾರೆಂಟ್ ಅನ್ನು ಇಂಗ್ಲಿಷ್ ಜ್ಞಾನದ ಕೊರತೆಯಿಂದ ಬಂಧನದ ವಾರೆಂಟ್ ಎಂದು ತಪ್ಪಾಗಿ ಅರ್ಥೈಸಿದ ಪೊಲೀಸರು ಉದ್ಯಮಿಯನ್ನು ಬಂಧಿಸಿ ಒಂದು ರಾತ್ರಿ ಲಾಕಪ್ನಲ್ಲಿ ಇರಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ನ್ಯಾಯಾಲಯದ ಸೂಚನೆಯ ಮೇಲ್ಭಾಗದಲ್ಲಿ ವಾರಂಟ್ ಎಂದು ಬರೆಯಲಾಗಿತ್ತು. ಆದರೆ ವಾಸ್ತವವಾಗಿ ಅದು ಪತ್ನಿಗೆ ಜೀವನಾಂಶ ನಿರ್ಧರಿಸಲು ಉದ್ಯಮಿ ಸಲ್ಲಿಸಿದ ಆಸ್ತಿಯ ವಿವರಗಳನ್ನು ಪರಿಶೀಲಿಸಲು ನೀಡಿದ ಸೂಚನೆಯಾಗಿತ್ತು. ಆದರೆ ಪೊಲೀಸರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಜೆಹಾನಾಬಾದ್ನ ಉದ್ಯಮಿ ನೀರಜ್ ಕುಮಾರ್ ಅವರನ್ನು ನವೆಂಬರ್ 25ರಂದು ಬಂಧಿಸಿ ಮರುದಿನ ಪಾಟ್ನಾದ ಕುಟುಂಬ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. "ಪೊಲೀಸರ ಪ್ರಮಾದ ನ್ಯಾಯಾಲಯದ ಅರಿವಿಗೆ ಬಂದ ತಕ್ಷಣ ಕೋರ್ಟ್ ನನ್ನ ಬಿಡುಗಡೆಗೆ ಆದೇಶ ನೀಡಿತು" ಎಂದು ನೀರಜ್ ಸ್ಪಷ್ಟಪಡಿಸಿದ್ದಾರೆ.
ಆರ್ಜೆಡಿ ನಾಯಕ ತೇಜ್ಪ್ರತಾಪ್ ಯಾದವ್ ಅವರ ವಿಚ್ಛೇದನ ಪ್ರಕರಣವನ್ನು ನಿರ್ವಹಿಸುತ್ತಿರುವ ಕುಟುಂಬ ನ್ಯಾಯಾಲಯ ವಕೀಲ ಯಶವಂತ್ ಕುಮಾರ್ ಶರ್ಮಾ ಹೇಳುವಂತೆ, "ನ್ಯಾಯಾಲಯ ಹೊರಡಿಸುವ ಈ ಸೂಚನೆಯನ್ನು ಡಿಸ್ಟ್ರೆಸ್ ವಾರೆಂಟ್ ಎಂದು ಕರೆಯುತ್ತೇವೆ. ಇದು ಪತಿಯ ಆಸ್ತಿಯನ್ನು ಪರಿಶೀಲಿಸಲು ನೀಡುವ ಸೂಚನೆ. ಆದರೆ ಪೊಲೀಸರು ಇದರ ಪರಿಜ್ಞಾನ ಇಲ್ಲದೇ ಬಂಧನ ವಾರೆಂಟ್ ಎಂದು ತಪ್ಪಾಗಿ ಭಾವಿಸಿದರು"
ಜೆಹಾನಾಬಾದ್ ಎಎಸ್ಪಿ ಪಂಕಜ್ ಕುಮಾರ್ ಕೂಡಾ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. "ಎಲ್ಲೂ ನೀರಜ್ ಬಂಧನಕ್ಕೆ ಸೂಚನೆ ಇರಲಿಲ್ಲ. ನೀರಜ್ ಅವರು ಪತ್ನಿ ರೇಣುದೇವಿಗೆ ಮಾಸಿಕ 2,500 ರೂಪಾಯಿ ಜೀವನಾಂಶ ನೀಡಲು ವಿಫಲವಾದಲ್ಲಿ, ಅವರ ಆಸ್ತಿಯ ಮೌಲ್ಯಮಾಪನ ಮಾಡಿ ಅವರ ಸ್ಥಿರಾಸ್ತಿ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಸೂಚನೆ ಇತ್ತು" ಎಂದು ಹೇಳಿದ್ದಾರೆ.