ರಾಜೀವ್ ಗಾಂಧಿ ಹತ್ಯೆಯಲ್ಲಿ ನಾವು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ: ಎಲ್ಟಿಟಿಇ
ಹೊಸದಿಲ್ಲಿ, ಡಿ. 3: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಘಟನೆಯೊಂದಿಗೆ ನಮಗೆ ಯಾವುದೇ ಸಂಬಂಧ ಇಲ್ಲ ಎಂದು ಎಲ್ಟಿಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಟಿಟಿಇಯ ರಾಜಕೀಯ ವಿಭಾಗದ ಪ್ರತಿನಿಧಿ ಕುರ್ಬುರನ್ ಗುರುಸ್ವಾಮಿ ಹಾಗೂ ಕಾನೂನು ವಿಭಾಗದ ಪ್ರತಿನಿಧಿ ಲಥನ್ ಚಂದ್ರಲಿಂಗಂ ಸಹಿ ಹಾಕಿದ ಈ ಹೇಳಿಕೆಯುಳ್ಳ ಪತ್ರವನ್ನು ಎಲ್ಟಿಟಿಇ ಬಿಡುಗಡೆ ಮಾಡಿದೆ.
‘ತಮಿಳು ಈಳಂ’ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸಂಘಟನೆ ಎಂದು ಎಲ್ಟಿಟಿಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಾಜೀವ್ ಗಾಂಧಿ ಹತ್ಯೆಯಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ಎಂಬುದನ್ನು ನಾವು ಪುರಾವೆಗಳ ಮೂಲಕ ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ, ಪರಿಶೀಲಿಸದೆ ಆರೋಪವನ್ನು ಈಗಲೂ ಹೇರಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಭಾರತದ ಮೇಲೆ ದಾಳಿ ನಡೆಸುವ ಹಾಗೂ ಭಾರತದ ನಾಯಕತ್ವವನ್ನು ನಾಶ ಮಾಡುವ ಯಾವುದೇ ಉದ್ದೇಶವನ್ನು ಎಲ್ಟಿಟಿಇ ಹೊಂದಿರಲಿಲ್ಲ. ಶ್ರೀಲಂಕಾದ ಭಾಗವಾಗಿರದ ಯಾವುದೇ ವ್ಯಕ್ತಿ ಅಥವಾ ನಾಯಕನಿಗೆ ಎದುರಾಗಿ ನಾವು ಎಂದಿಗೂ ನಮ್ಮ ಬಂದೂಕನ್ನು ತಿರುಗಿಸಿಲ್ಲ. ಭಾರತದ ಯಾವುದೇ ರಾಷ್ಟ್ರೀಯ ನಾಯಕರ ವಿರುದ್ಧ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.