ನಾವು ಜಿನ್ನಾರ ಸಿದ್ಧಾಂತ ವಿರೋಧಿಸಿ ಭಾರತ ಮಾತೃಭೂಮಿ ಎಂದು ಒಪ್ಪಿಕೊಂಡವರು
ಆದಿತ್ಯನಾಥ್ ಗೆ ಉವೈಸಿ ತಿರುಗೇಟು
ಹೈದರಾಬಾದ್, ಡಿ.5: ತನ್ನನ್ನು ‘ನಿಝಾಮ’ ಎಂದು ಕರೆದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ಗೆ ತಿರುಗೇಟು ನೀಡಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ, ತಾನು ನಂ.1 ಭಾರತೀಯನಾಗಿದ್ದು ಸಮಾನ ಹಕ್ಕು ಹೊಂದಿರುವ ನಾಗರಿಕನಾಗಿದ್ದೇನೆ ಎಂದಿದ್ದಾರೆ.
ತಾನಿಲ್ಲಿ ಬಾಡಿಗೆಗೆ ಬಂದವನಲ್ಲ. ಭಾರತದ ಪೌರನಾಗಿದ್ದೇನೆ. ಇಲ್ಲಿಯ ಸಹಭಾಗಿಯಾಗಿದ್ದೇನೆ. ನಾವು(ಮುಸ್ಲಿಮರು) ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿ ಭಾರತ ನಮ್ಮ ಮಾತೃಭೂಮಿ ಎಂದು ಒಪ್ಪಿಕೊಂಡಿದ್ದೇವೆ. ನಮ್ಮನ್ನು ದ್ವಿತೀಯ ದರ್ಜೆಯ ಪ್ರಜೆಗಳೆಂದು ಭಾವಿಸಬೇಡಿ ಎಂದವರು ಹೇಳಿದರು.
ತೆಲಂಗಾಣದಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಆದಿತ್ಯನಾಥ್ರನ್ನು ಟೀಕಿಸಿದ ಉವೈಸಿ, ಉತ್ತರಪ್ರದೇಶದಲ್ಲಿ ಗುಂಪು ದಾಳಿಯ ಬಳಿಕ ಹಿಂಸಾಚಾರ ನಡೆದು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರೂ ಮುಖ್ಯಮಂತ್ರಿ ಆದಿತ್ಯನಾಥ್ ಇಲ್ಲಿ ಚುನಾವಣಾ ಪ್ರವಾಸೋದ್ಯಮದಲ್ಲಿ ಬಿಸಿಯಾಗಿದ್ದಾರೆ. ರಾಜ್ಯದ ಜನತೆ ಇವರ ನಿರ್ಲಕ್ಷದ ಧೋರಣೆಯಿಂದ ರೋಸಿ ಹೋಗಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರೂ ಮೃತಪಟ್ಟಿದ್ದಾರೆ. ಆದರೆ ಸಂತ್ರಸ್ತ ಪೊಲೀಸರ ಕುಟುಂಬಕ್ಕೆ ಸಾಂತ್ವನ ಹೇಳಲೂ ಆದಿತ್ಯನಾಥ್ಗೆ ಪುರುಸೊತ್ತಿಲ್ಲ ಎಂದು ಟೀಕಿಸಿದ್ದಾರೆ.