ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಶಿ ತರೂರ್
ಹೊಸದಿಲ್ಲಿ, ಡಿ.10: ತನ್ನನ್ನು ‘ಹತ್ಯೆ ಪ್ರಕರಣದಲ್ಲಿ ಆರೋಪಿ’ ಎಂದು ಕರೆದಿರುವ ಬಿಜೆಪಿ ಸಚಿವ ರವಿ ಶಂಕರ್ ಪ್ರಸಾದ್ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸುನಂದಾ ಪುಷ್ಕರ್ ನಿಗೂಢ ಸಾವಿಗೆ ಸಂಬಂಧಿಸಿ ತನ್ನ ಮೇಲೆ ಆರೋಪ ಹೊರಿಸಿರುವ ಪ್ರಸಾದ್ ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕಾನೂನು ನೋಟಿಸ್ನ್ನು ಕಳುಹಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ ತಿಂಗಳ ಬಳಿಕ ಕೋರ್ಟಿಗೆ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.
ಪ್ರಸಾದ್ ಉದ್ದೇಶಪೂರ್ವಕವಾಗಿ ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ನೊಟೀಸ್ ಸ್ವೀಕರಿಸಿದ 48 ಗಂಟೆಯೊಳಗೆ ಬೇಷರತ್ ಕ್ಷಮೆಯಾಚಿಸಬೇಕು. ಟ್ವಿಟರ್ನಲ್ಲಿರುವ ತಪ್ಪು,ಅತ್ಯಂತ ಮಾನಹಾನಿ ಹೇಳಿಕೆಗಳನ್ನು ಅಳಿಸಿಹಾಕಬೇಕೆಂದು ತರೂರ್ ಆಗ್ರಹಿಸಿದ್ದರು.
ಕ್ಷಮೆ ಕೇಳಲು ನಿರಾಕರಿಸಿರುವ ಪ್ರಸಾದ್,‘‘ಕ್ಷಮೆಯಾಚಿಸುವ ಅಥವಾ ಟ್ವಿಟ್ನ್ನು ಅಳಿಸಿಹಾಕುವ ಪ್ರಶ್ನೆಯೇ ಇಲ್ಲ’’ ಎಂದಿದ್ದಾರೆ.
Next Story