ಉದ್ಯೋಗ ಸೃಷ್ಟಿಯಾಗುತ್ತಿಲ್ಲವೆಂದಾದರೆ ಸಾಮಾಜಿಕ ಅಶಾಂತಿಯೇಕಿಲ್ಲ: ಜೇಟ್ಲಿ ಪ್ರಶ್ನೆ
ಹೊಸದಿಲ್ಲಿ, ಡಿ. 11: ''ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲವೆಂದಾದರೆ ನಾವೇಕೆ ಸಾಮಾಜಿಕ ಅಶಾಂತಿಯನ್ನು ಕಾಣುತ್ತಿಲ್ಲ ?'' ಎಂಬ ಪ್ರಶ್ನೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಎತ್ತಿದ್ದಾರೆ.
ತಮ್ಮ ಪಕ್ಷದ ನೇತೃತ್ವದ ಸರಕಾರದ ಅವಧಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಪ್ರಮುಖ ಪ್ರತಿಭಟನೆ ನಡೆದಿಲ್ಲ ಎಂದು ಅವರು ಹೇಳಿಕೊಂಡರು.
''ಪ್ರತಿಭಟನೆ, ಹೋರಾಟ, ಆಂದೋಲನಗಳು ಸಾಮಾಜಿಕ-ಆರ್ಥಿಕ ಅಸಮಾಧಾನ ಅಥವಾ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಮಾತ್ರ ನಡೆಯುತ್ತವೆ. ಆದರೆ ಇವೆಲ್ಲಾ ನಡೆದಿಲ್ಲ, ಏಕೆಂದರೆ ಆರ್ಥಿಕತೆ ಅಭಿವೃದ್ಧಿಗೊಂಡಾಗ ವಿವಿಧ ರಂಗಗಳೂ ಅಭಿವೃದ್ಧಿಗೊಂಡು ಸಹಜವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ,'' ಎಂದು ಜೇಟ್ಲಿ ಹೇಳಿದರು.
''ನಿರ್ಮಾಣ ಕ್ಷೇತ್ರದ ಪುನರುಜ್ಜೀವನ ಹಾಗೂ ಜವಳಿ ರಂಗದಲ್ಲಿ ಕೂಡ ಸುಧಾರಣೆಯಾಗಿರುವುದು ಉದ್ಯೋಗ ಸೃಷ್ಟಿಗೂ ಕೊಡುಗೆ ನೀಡಿದೆ. ದೇಶದ ಉತ್ಪಾದನಾ ರಂಗವೂ ನವೆಂಬರ್ ತಿಂಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ'' ಎಂದು ಜೇಟ್ಲಿ ಹೇಳಿಕೊಂಡರಲ್ಲದೆ ನವೆಂಬರ್ ತಿಂಗಳಲ್ಲಿ ಉತ್ಪಾದನಾ ಕ್ಷೇತ್ರದ ಪ್ರಗತಿ ಕಳೆದ 11 ತಿಂಗಳಲ್ಲಿಯೇ ಅಧಿಕವಾಗಿದೆ ಎಂದು ನಿಕ್ಕೀ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಉಲ್ಲೇಖಿಸಿ ಜೇಟ್ಲಿ ಹೇಳಿದರು.
''ಮುದ್ರಾದಂತಹ ಯೋಜನೆಗಳು ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಿವೆ'' ಎಂದೂ ಅವರು ತಿಳಿಸಿದರು.