ರಫೇಲ್: ಎಜಿ, ಸಿಎಜಿಗೆ ಪಿಎಸಿ ಸಮನ್ಸ್?
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಪ್ಪು ಮಾಹಿತಿ ನೀಡಿದ ಆರೋಪ
ಹೊಸದಿಲ್ಲಿ, ಡಿ. 16: ವಿವಾದಾತ್ಮಕ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಪ್ಪು ಮಾಹಿತಿ ನೀಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಅಟಾರ್ನಿ ಜನರಲ್ ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಗೆ ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ಪಿಎಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಹೋರಾಟ ಮುಂದುವರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಲಿದೆ. ಕೇವಲ ಸಂಸದೀಯ ಸಮಿತಿ ಮಾತ್ರ ಪ್ರಧಾನಿ ಭರವಸೆಯ ಬಗೆಗಿನ ಸಾಕ್ಷ್ಯವನ್ನು ಪರಿಶೀಲಿಸಬಹುದಾಗಿದೆ. ಸುಪ್ರೀಂಕೋರ್ಟ್ ರಫೇಲ್ ಒಪ್ಪಂದದ ಬೆಲೆನಿಗದಿ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ. ಜಂಟಿ ಸಂಸದೀಯ ಸಮಿತಿ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಒಪ್ಪಂದ ಕುರಿತ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಲಾಗಿದ್ದು, ಅದು ಪರಿಶೀಲಿಸಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ತಪ್ಪು ಮಾಹಿತಿ ನೀಡಿ ಸುಪ್ರೀಂಕೋರ್ಟಿನ ದಾರಿ ತಪ್ಪಿಸಿದ ಕೇಂದ್ರ ಸರ್ಕಾರ, ನ್ಯಾಯಾಲಯ ನಿಂದನೆಯಿಂದ ತಪ್ಪಿಸಿಕೊಳ್ಳಲು ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
"ಎಜಿ ಹಾಗೂ ಸಿಎಜಿಗೆ ಸಮನ್ಸ್ ನೀಡಿ, ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿಯನ್ನು ಯಾವಾಗ ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಕೇಳುವಂತೆ ಪಿಎಸಿ ಸದಸ್ಯರಿಗೆ ಮನವಿ ಮಾಡಲಿದ್ದೇನೆ" ಎಂದು ಖರ್ಗೆ ಸ್ಪಷ್ಟಪಡಿಸಿದರು.
"ಕೇಂದ್ರ ಸರ್ಕಾರ ರಾಷ್ಟ್ರಕ್ಕೆ ಮಂಕು ಬೂದಿ ಎರಚಿ ಜನರನ್ನು ವಂಚಿಸಿದೆ. ಇದೀಗ ಸುಪ್ರೀಂಕೋರ್ಟ್ನ ದಾರಿ ತಪ್ಪಿಸಿದೆ. ಇದು ನ್ಯಾಯಾಲಯ ನಿಂದನೆ, ವಿಶೇಷ ಹಕ್ಕುಗಳ ಉಲ್ಲಂಘನೆಯಾಗುತ್ತದೆ" ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅಭಿಪ್ರಾಯಪಟ್ಟರು.