ಎಚ್ಐವಿ ಪೀಡಿತ ಬಾಲಕಿಗೆ ಮಾವನಿಂದಲೇ ಹಲ್ಲೆ
ಕೊಯಮತ್ತೂರು, ಡಿ. 16: ಎಚ್ಐವಿ ಪೀಡಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಆರೋಪದಲ್ಲಿ ಬಾಲಕಿಯ ಮಾವನನ್ನು ಕೊಯಮತ್ತೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಅರುಣ್ ಅಲಿಯಾಸ್ ಅರುಚಾಮಿ (30) ಬಂಧಿತ ಆರೋಪಿ.
ತೊಂಡಮುತ್ತೂರು ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಎಚ್ಐವಿ ಪೀಡಿತ ಬಾಲಕಿ ತನ್ನ 21 ವರ್ಷದ ಸಹೋದರನ ಜತೆ ವಾಸವಿದ್ದಳು. ಈಕೆಯ ತಾಯಿ ಇತ್ತೀಚೆಗೆ ಮೃತಪಟ್ಟಿದ್ದರು.
ಶುಕ್ರವಾರ ರಾತ್ರಿ ತೀರಾ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಂಬಂಧಿಕರ ಮನೆಗೆ ತೆರಳಲು ನಿರ್ಧರಿಸಿದಳು. ಸೋದರಮಾವ ಅರುಚಾಮಿ ಮನೆಗೆ ತೆರಳಿದ ಈಕೆ ರಾತ್ರಿ ಊಟ ಮುಗಿಸಿ ಅಲ್ಲೇ ನಿದ್ದೆ ಮಾಡಿದಳು. ಮನೆಗೆ ಬಂದು ವಿಷಯ ತಿಳಿದ ಅರುಚಾಮಿ ಬಾಲಕಿಯನ್ನು ನಿಂದಿಸಿ, ದೊಣ್ಣೆಯಿಂದ ಹೊಡೆದು ಆಕೆಯನ್ನು ಬೀದಿಗೆ ಎಸೆದ ಎನ್ನಲಾಗಿದೆ.
ಇದನ್ನು ನೋಡಿದ ದಾರಿಹೋಕರು ಬಾಲಕಿಯನ್ನು ಸಿಎಂಸಿಎಚ್ ಆಸ್ಪತ್ರೆಗೆ ಸೇರಿಸಿದರು. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಸಿಎಂಸಿಎಚ್ ವೈದ್ಯರು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರನೆ ನಡೆಸಿದರು. ಬಾಲಕಿಯ ಸಹೋದರ ನೀಡಿದ ದೂರಿನ ಮೇರೆಗೆ ಅರುಚಾಮಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.