ರಫೇಲ್ ಬೆಲೆ ಗೊತ್ತಿದ್ದರೂ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ: ನಿರ್ಮಲಾ ಸೀತಾರಾಮನ್
ಮುಂಬೈ, ಡಿ. 17: ಕಾಂಗ್ರೆಸ್ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೇಲ್ ಜೆಟ್ ಬೆಲೆ ಕುರಿತು ಪ್ರತಿಪಕ್ಷ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಕ್ಷಣಾ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸೋನಿಯಾ ಗಾಂಧಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ರಫೇಲ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪರಿಗಣಿಸದೆ ಅವರು ಅದ್ಭುತ ಎದೆಗಾರಿಕೆ ತೋರಿಸುತ್ತಿದ್ದಾರೆ ಎಂದರು.
ರಫೇಲ್ ಜೆಟ್ಗಳ ಬೆಲೆ ಕುರಿತು ಕಾಂಗ್ರೆಸ್ಗೆ ಗೊತ್ತಿದ್ದೂ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಮುಂಬೈಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. “ನಾವು ಜೆಟ್ ಬೆಲೆಯನ್ನು ಸಿಎಜಿಗೆ ನೀಡಿದ್ದೇವೆ. ಸಂಸದೀಯ ವ್ಯವಸ್ಥೆಯಲ್ಲಿ ಸಿಎಜಿ ಅದನ್ನು ಪರಿಶೀಲಿಸುತ್ತದೆ ಹಾಗೂ ಅನಂತರ ಅದರ ವರದಿ ಪಿಎಸಿಗೆ ತಲುಪುತ್ತದೆ. ಪಿಎಸಿ ಅದನ್ನು ನೋಡಬೇಕಾಗಿದೆ ಹಾಗೂ ಅನಂತರ ಅದು ಸಾರ್ವಜನಿಕ ದಾಖಲೆ ಆಗುತ್ತದೆ. ಇದು ಒಂದು ಪ್ರಕ್ರಿಯೆ ಹಾಗೂ ಇದು ಆರಂಭವಾಗಿದೆ ಎಂದು ಅವರು ಹೇಳಿದರು.
ಅಫಿದಾವಿತ್ನಲ್ಲಿ ನಾವು ದತ್ತಾಂಶ ಹಾಗೂ ಮಾಹಿತಿ ನೀಡಿದ್ದೇವೆ. ಅದರಲ್ಲಿ ವ್ಯಾಖ್ಯಾನದ ಸಮಸ್ಯೆ ಇದೆ ಎಂದು ನಾವು ಭಾವಿಸುತ್ತೇವೆ. ನೀವು (ಸುಪ್ರೀಂ ಕೋರ್ಟ್) ಕೂಡ ಅದನ್ನು ಪರಿಶೀಲಿಸುವಂತೆ ಹಾಗೂ ಸರಿಪಡಿಸಲು ನಾವು ಬಯಸುತ್ತೇವೆ. ಇದು ನ್ಯಾಯಾಲಯದಲ್ಲಿ ನಮ್ಮ ಮನವಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.