ಉತ್ತರಪ್ರದೇಶ: ಗೋಹತ್ಯೆ ನಿಷೇಧದಿಂದ ಎಲ್ಲೆಂದರಲ್ಲಿ ಅಲೆಮಾರಿ ಜಾನುವಾರುಗಳು
ಸಮಸ್ಯೆ ಪರಿಹರಿಸಲು ರೈತರ ಒತ್ತಾಯ
ಆಗ್ರಾ/ವೃಂದಾವನ, ಡಿ. 17: ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ಗೋಹತ್ಯೆ ನಿಷೇಧಿಸಿದ ಬಳಿಕ ಏರಿಕೆಯಾಗುತ್ತಿರುವ ಗೋವು ಸಂತತಿಯಿಂದ ಬೆಳೆ ಹಾನಿ, ಸಂಚಾರಕ್ಕೆ ಅಡ್ಡಿಯಾಗಿದೆ. ಜನಜೀವನಕ್ಕೆ ತೊಂದರೆ ಉಂಟಾಗಿದೆ. ಇದಕ್ಕೆ ತುರ್ತು ಪರಿಹಾರ ಒದಗಿಸುವಂತೆ ಕೋರಿ ಗ್ರಾಮೀಣ ಒಳನಾಡಿನ ರೈತರು ಮಾತ್ರವಲ್ಲದೆ, ನಗರಗಳ ಜನರು ಕೂಡ ಸ್ಥಳೀಯಾಡಳಿತವನ್ನು ಸಂಪರ್ಕಿಸುತ್ತಿದ್ದಾರೆ.
ರಸ್ತೆ ದಾಟುವಲ್ಲಿ ಹಾಗೂ ಜನನಿಬಿಡ ಬೀದಿಗಳಲ್ಲಿ ಜಾನುವಾರುಗಳ ಗುಂಪು ಭೀತಿ ಹುಟ್ಟಿಸುವಂತೆ ಅಲೆದಾಡುತ್ತಿವೆ. ಗೂಳಿಗಳು ಜನರಿಗೆ ಹಾಯುತ್ತಿವೆ. ಇದರಿಂದ ಪ್ರತಿದಿನ ಹಲವರು ಗಾಯಗೊಳ್ಳುತ್ತಿದ್ದಾರೆ. ಪೊಲೀಸರು ಹಾಗೂ ನಗರಾಡಳಿತದ ಅಧಿಕಾರಿಗಳು ತಾವು ಅಸಹಾಯಕರು ಎಂದು ಹೇಳುತ್ತಿದ್ದಾರೆ.
ಉತ್ತರಪ್ರದೇಶ ಸರಕಾರ ಗೋವು ಹತ್ಯೆ ನಿಷೇಧ ಜಾರಿಗೊಳಿಸಿದ ಬಳಿಕ ರಸ್ತೆ, ಸಾರ್ವಜನಿಕ ಉದ್ಯಾನಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ‘‘ಈ ಅಲೆಮಾರಿ ಗೋವುಗಳಿಗೆ ಯಾರೊಬ್ಬರೂ ಆಹಾರ ನೀಡುವುದಿಲ್ಲ. ಇವುಗಳು ಪಾಲಿಥಿನ್ ಬ್ಯಾಗ್ ಹಾಗೂ ಚರ್ಮ ಸಹಿತ ತ್ಯಾಜ್ಯಗಳನ್ನು ಸೇವಿಸುತ್ತಿವೆ. ಕೆಲವೊಮ್ಮೆ ಇವುಗಳು ರೊಚ್ಚಿಗೇಳುತ್ತಿವೆ ಹಾಗೂ ಜನರ ಮೇಲೆ ದಾಳಿ ನಡೆಸುತ್ತಿವೆ’’ ಎಂದು ಸ್ಥಳೀಯ ನಿವಾಸಿ ಜುಗಲ್ ಕಿಶೋರ್ ತಿಳಿಸಿದ್ದಾರೆ.
ಬ್ರಾಜ್ ಪ್ರದೇಶದಲ್ಲಿನ ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಆದುದರಿಂದ ಪ್ರಾಣಿಗಳಿಗೆ ಸಂತಾನ ಹರಣ ಮಾಡುವಂತೆ ಜನರು ಆಗ್ರಹಿಸುತ್ತಿದ್ದಾರೆ. ಮಥುರಾ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಖಾಸಗಿ ಗೋಶಾಲೆಗಳು ಇವೆ. ಈ ಗೋಶಾಲೆಗಳೆಲ್ಲ ಜಾನುವಾರುಗಳಿಂದ ತುಂಬಿವೆ. ರಾಧಾಕುಂಡ್ನಲ್ಲಿ ಜರ್ಮನ್ನ ಮಹಿಳೆಯೋರ್ವರು ನಡೆಸು ತ್ತಿರುವ ಗೋಶಾಲೆಯಲ್ಲಿ 1700ಕ್ಕೂ ಅಧಿಕ ಗೋವು ಹಾಗೂ ಗೂಳಿಗಳು ಇವೆ.