ಬೇರೆ ರಾಜ್ಯಗಳಿಗೆ ಎನ್ಆರ್ಸಿ ವಿಸ್ತರಿಸುವ ಪ್ರಸ್ತಾವ ಇಲ್ಲ: ಕೇಂದ್ರ
ಹೊಸದಿಲ್ಲಿ, ಡಿ. 17: ಅಸ್ಸಾಂ ಹೊರತುಪಡಿಸಿ ಇತರ ರಾಜ್ಯಗಳಿಗೆ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ)ಯನ್ನು ವಿಸ್ತರಿಸುವ ಪ್ರಸ್ತಾವ ಇಲ್ಲ ಎಂದು ಮಂಗಳವಾರ ರಾಜ್ಯ ಸಭೆಗೆ ತಿಳಿಸಲಾಯಿತು. ಲಿಖಿತ ಹೇಳಿಕೆ ನೀಡಿದ ಗೃಹ ಖಾತೆಯ ಸಹಾಯಕ ಸಚಿವ, ಪ್ರಸ್ತುತ ಎನ್ಆರ್ಸಿಯನ್ನು ಇತರ ರಾಜ್ಯಗಳಿಗೆ ವಿಸ್ತರಿಸುವ ಪ್ರಸ್ತಾಪ ಇಲ್ಲ ಎಂದು ಹೇಳಿದರು.
ತ್ರಿಪುರಾದಲ್ಲಿ ಎನ್ಆರ್ಸಿ ಅನುಷ್ಠಾನಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರಕಾರ ತ್ರಿಪುರಾದಲ್ಲಿ ಎನ್ಆರ್ಸಿ ಪುನರ್ ಜಾರಿ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಈ ವರ್ಷ ಜುಲೈ 30ರಂದು ಅಸ್ಸಾಂನಲ್ಲಿ ಎನ್ಆರ್ಸಿಯ ಸಂಪೂರ್ಣ ಕರಡನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 40 ಲಕ್ಷ ಅರ್ಜಿದಾರರು ಸೇರಿರಲಿಲ್ಲ. ರಾಜ್ಯದ ನ್ಯಾಯಬದ್ದ ನಾಗರಿಕರ ದಾಖಲೆಗಳನ್ನು ರೂಪಿಸುವುದು ಈ ಕರಡಿನ ಉದ್ದೇಶ ಎಂದು ಹೇಳಲಾಗಿತ್ತು.