ಘೋಷಣೆಗಳಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯವಾಗದು: ಅರುಣ್ ಜೇಟ್ಲಿ
“ಘೋಷಣೆಗಳ ಅನುಷ್ಠಾನ ಸಾಧ್ಯವಿಲ್ಲ ಎನ್ನುವುದು ಜನರಿಗೆ ಅರ್ಥವಾಗುತ್ತದೆ”
ಹೊಸದಿಲ್ಲಿ, ಡಿ. 19: ಬಡತನ ನಿರ್ಮೂಲನೆಗೊಳಿಸಲು ಹಾಗೂ ಜನರ ಆಕಾಂಕ್ಷೆಗಳನ್ನು ಈಡೇರಿಸಲು ದೃಢ ನೀತಿ ಅಗತ್ಯ. ಘೋಷಣೆಗಳಿಂದ ಇದು ಸಾಧ್ಯವಾಗದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಘೋಷಣೆಗಳು ಹೆಚ್ಚು ಕಾಲ ಬಾಳದು ಹಾಗೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಜನರಿಗೆ ಕೂಡಲೇ ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ನೀತಿ ಆಯೋಗ ಸಿದ್ದಪಡಿಸಿದ ‘ಸ್ಟ್ರಾಟಜಿ ಫಾರ್ ನ್ಯೂ ಇಂಡಿಯಾ@75’ ಬಿಡುಗಡೆ ಮಾಡಿ ಮಾತನಾಡಿದ ಅವರು, ದೃಢ ನೀತಿ ಉತ್ತಮವೇ ಅಥವಾ ಘೋಷಣೆ ಉತ್ತಮವೇ ಎಂಬುದು ಯಾವತ್ತೂ ಚರ್ಚೆಯ ವಿಚಾರ. ‘‘ಪ್ರಜಾಪ್ರಭುತ್ವದಲ್ಲಿ ಈ ಚರ್ಚೆ ಯಾವಾಗಲೂ ಉದ್ಭವಿಸುತ್ತದೆ. ಮಹತ್ವಾಕಾಂಕ್ಷೆ ಹೊಂದಿರುವ ಹಾಗೂ ಕಡಿಮೆ ತಾಳ್ಮೆ ಹೊಂದಿರುವ ಆಕಾಂಕ್ಷಿ ಜನರು ಘೋಷಣೆಗಳನ್ನು ವಾಸ್ತವಕ್ಕೆ ಪರಿವರ್ತನೆ ಮಾಡಲು ಇರುವ ಅಸಮರ್ಥತೆಯನ್ನು ಒಂದೆರೆಡು ದಿನಗಳಲ್ಲಿ ಗುರುತಿಸುತ್ತಾರೆ’’ ಎಂದು ಜೇಟ್ಲಿ ಹೇಳಿದ್ದಾರೆ.
ದೃಢ ನೀತಿ ಯಾವಾಗಲೂ ಆರ್ಥಿಕತೆಯನ್ನು ಸರಿ ದಾರಿಗೆ ತರಬಲ್ಲುದು. ಜನರನ್ನು ಬಡತನದಿಂದ ಹೊರಗೆ ತರಲು ಹಾಗೂ ಅವರ ಉತ್ತಮ ಗುಣಮಟ್ಟದ ಬದುಕು ನೀಡಲು ಇದು ನಿರಂತರ ನೆರವಾಗಲಿದೆ ಎಂದು ಅವರು ತಿಳಿಸಿದರು.