ದಲಿತ, ಮುಸ್ಲಿಂ ಅಲ್ಲ, ಈ ಎಸ್ಪಿ ನಾಯಕನ ಪ್ರಕಾರ ಹನುಮಾನ್ ಈ ಸಮುದಾಯದವನು...
ಲಕ್ನೊ, ಡಿ. 22: ಹನುಮಾನ್ ಗೋಂಡಾ ಸಮುದಾಯಕ್ಕೆ ಸೇರಿದವನು ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಶಂಕರ್ ವಿದ್ಯಾರ್ಥಿ ಶುಕ್ರವಾರ ಹನುಮಾನ್ ಜಾತಿ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ.
ಲೋಕಸಭೆಯ ಮಾಜಿ ಸದಸ್ಯ ವಿದ್ಯಾರ್ಥಿ ಅವರ ವೀಡಿಯೊ ವ್ಯಾಪಕವಾಗಿ ಶೇರ್ ಆಗಿದೆ. ವೀಡಿಯೋದಲ್ಲಿ ಹನುಮಾನ್ ದಲಿತ ಅಥವಾ ಮುಸ್ಲಿಂ ಎಂದು ಬಿಜೆಪಿ ನಾಯಕರು ನೀಡಿದ ಹೇಳಿಕೆಯನ್ನು ಅವರು ಖಂಡಿಸುವುದು ಕಾಣಿಸುತ್ತಿದೆ.
ಹನುಮಾನ್ ಗೋಂಡಾ ಸಮುದಾಯದ ಪ್ರಾಬಲ್ಯವಿರುವ ಗೊಂಡ್ವಾನ ವಲಯದಲ್ಲಿ ಜನಿಸಿದ ಎಂಬುದನ್ನು ಬಿಜೆಪಿಯವರು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿ ಹೇಳಿದ್ದಾರೆ.
ಹನುಮಾನ್ ಈ ಪ್ರದೇಶದ ಆಡಳಿತಗಾರ. ಆದುದರಿಂದ ಆತ ಗೋಂಡಾ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಇದಲ್ಲದೆ, ಧಾರ್ಮಿಕ ಪಠ್ಯಗಳು ಕೂಡ ಹನುಮಂತ ಗೋಂಡಾ ಸಮುದಾಯದ ರಾಜ ಎಂದು ಅವರು ಹೇಳಿದ್ದಾರೆ.
ದಲಿತ ಅಥವಾ ಮುಸ್ಲಿಂ ಎಂದು ಕರೆಯುವ ಮೂಲಕ ಬಿಜೆಪಿ ನಾಯಕರು ಹನುಮಾನ್ನನ್ನು ತುಚ್ಛವಾಗಿರಿಸಿದ್ದಾರೆ. ಜಾತಿ ಹಾಗೂ ಸಮುದಾಯದ ಅಡಿಯಲ್ಲಿ ದೇವರನ್ನು ವಿಭಜಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಬಿಜೆಪಿ ಎಂಎಲ್ಸಿ ಬಕ್ಕಲಂ ನವಾಬ್ ಹನುಮಾನ್ ಮುಸ್ಲಿಂ ಎಂದು, ಉತ್ತರಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಚೌಧುರಿ ಲಕ್ಷ್ಮೀ ನಾರಾಯಣ್ ಹನುಮಾನ್ ಜಾಟ್ ಸಮುದಾಯಕ್ಕೆ ಸೇರಿದವನನು ಎಂದಿದ್ದರು.