“ಮಸೀದಿ ನಿರ್ಮಿಸಲು ಬಂದಿದ್ದೀರಾ?”: ನಮಾಝ್ ಮಾಡುತ್ತಿದ್ದವರನ್ನು ಬೆದರಿಸಿದ ಸಂಘಪರಿವಾರ ಕಾರ್ಯಕರ್ತರು
ಫೋಟೊ ಕೃಪೆ: ndtv.com
ಲಕ್ನೋ, ಡಿ.27: ತಮ್ಮ ಉದ್ಯೋಗಿಗಳು ಪಾರ್ಕ್ ಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಸದೇ ಇರುವಂತೆ ನೋಡಿಕೊಳ್ಳಬೇಕೆಂದು ನೊಯ್ಡಾದ ಸೆಕ್ಟರ್ 58ರಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಪೊಲೀಸರು ಸೂಚನೆ ನೀಡಿರುವುದು ವಿವಾದ ಸೃಷ್ಟಿಸಿದೆ. ಈ ನಡುವೆ ಸಂಘಪರಿವಾರ ಕಾರ್ಯಕರ್ತರು ಪಾರ್ಕ್ ಒಂದರಲ್ಲಿ ಪ್ರಾರ್ಥಿಸುತ್ತಿರುವ ಕೆಲ ಮುಸ್ಲಿಮರನ್ನು ಬೆದರಿಸುತ್ತಿರುವ ವಿಡಿಯೋವೊಂದು ಹರಿದಾಡುತ್ತಿದ್ದು, ವಿವಾದಿತ ಆದೇಶಕ್ಕೆ ಇದೇ ಕಾರಣವಾಗಿರಬಹುದೆಂಬ ಶಂಕೆಯಿದೆ.
ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬನನ್ನುದ್ದೇಶಿಸಿ ಸಂಘಪರಿವಾರ ಕಾರ್ಯಕರ್ತನೊಬ್ಬ ಬಿಹಾರದ ಕಿಶನ್ಘರ್ ನಿಂದ ಇಲ್ಲಿಗೆ `ಮಸೀದಿ ನಿರ್ಮಿಸಲು' ಬಂದಿದ್ದೇ ಎಂದು ಪ್ರಶ್ನಿಸುತ್ತಿರುವುದು ವೀಡಿಯೋದ ಆರಂಭದಲ್ಲಿ ಕಾಣಿಸುತ್ತದೆ. ಆಗ ಮುಸ್ಲಿಂ ವ್ಯಕ್ತಿ ತಾವು ನಮಾಝ್ ಮಾಡಲು ಆಗಮಿಸಿರುವುದಾಗಿ ಹೇಳಿದಾಗ ಎಲ್ಲರೆದುರು ಗದ್ದಲ ಸೃಷ್ಟಿಸುತ್ತಿದ್ದೀರಿ ಎಂದು ಆತ ಆರೋಪಿಸುತ್ತಾನೆ. ತಾವು ಕೇವಲ ಶುಕ್ರವಾರಗಳಂದು ಮಾತ್ರ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ಅವರೆಲ್ಲಾ ತಿಳಿಸಿದರೂ ಪ್ರಯೋಜನವಾಗುವುದಿಲ್ಲ. ಇಲ್ಲಿ ನಮಾಝ್ ಸಲ್ಲಿಸುತ್ತಿದ್ದಾತನನ್ನು ಪ್ರಶ್ನಿಸಿದ ವ್ಯಕ್ತಿ ಸ್ಥಳೀಯನಾದ ಮನೋಜ್ ಶರ್ಮ ಎಂದು ತಿಳಿದು ಬಂದಿದೆ.
ಈ ವೀಡಿಯೋವನ್ನು ಸಂಘಪರಿವಾರ ಕಾರ್ಯಕರ್ತರು ಚಿತ್ರೀಕರಿಸಿರುವುದು ಬಹುತೇಕ ಸ್ಪಷ್ವವಾಗಿದೆ.