ವರ್ಗಾವಣೆಯಿಂದ ಪಾರಾಗಲು ಎನ್ ಕೌಂಟರ್ ನಡೆಸುವ ಉತ್ತರ ಪ್ರದೇಶ ಪೊಲೀಸರು: ಅಖಿಲೇಶ್ ಆರೋಪ
ಲಕ್ನೊ, ಡಿ.30: ಗಾಝಿಪುರದಲ್ಲಿ ಶನಿವಾರ ನಡೆದ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣಕ್ಕೂ, ಮುಖ್ಯಮಂತ್ರಿ ಆದಿತ್ಯನಾಥ್ ಸದಾ ಹೇಳುತ್ತಿರುವ ‘ಥೋಕ್ ದೊ’(ಅವರನ್ನು ಗುಂಡಿಕ್ಕಿ) ಹೇಳಿಕೆಗೂ ಸಂಬಂಧವಿದೆ ಎಂದು ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
ತನ್ನನ್ನು ವರ್ಗಾಯಿಸಲು ಸರಕಾರ ನಿರ್ಧರಿಸಿದೆ ಎಂಬುದು ತಿಳಿಯುತ್ತಿದ್ದಂತೆಯೇ ಆ ಅಧಿಕಾರಿ ಎನ್ಕೌಂಟರ್ ಪ್ರಕ್ರಿಯೆಯನ್ನು ನಡೆಸುವ ಮೂಲಕ ಮುಖ್ಯಮಂತ್ರಿಗಳ ಕೃಪೆಗೆ ಪಾತ್ರರಾಗಿ ವರ್ಗಾವಣೆಯಿಂದ ಬಚಾವಾಗುತ್ತಾರೆ ಎಂದು ಯಾದವ್ ಹೇಳಿದ್ದಾರೆ.
ಘಟನೆಯ ಬಗ್ಗೆ ಸರಕಾರ ತನಿಖೆಗೆ ಆದೇಶಿಸಿದೆ ಎಂದು ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ. ಆದಿತ್ಯನಾಥ್ ಅವರ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿದೆ. ದುಷ್ಕರ್ಮಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ತೋರಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಈ ಮಧ್ಯೆ, ಪೊಲೀಸ್ ಕಾನ್ಸ್ಟೇಬಲ್ ಹತ್ಯೆಯ ಪ್ರಕರಣದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಪಾತ್ರವಿಲ್ಲ ಎಂದು ನಿಶದ್ ಪಕ್ಷದ ಮುಖಂಡ ಸಂಜಯ್ ಕುಮಾರ್ ನಿಶದ್ ಹೇಳಿದ್ದಾರೆ.