ಆಗ್ರಾದಲ್ಲೂ ಶಾಲೆ, ಆರೋಗ್ಯ ಕೇಂದ್ರದೊಳಗೆ ಜಾನುವಾರುಗಳು !
ಬೀಡಾಡಿ ದನಗಳಿಂದ ರೋಸಿ ಹೋದ ರೈತರು
ಆಗ್ರಾ, ಡಿ.30: ಈಗ ಉತ್ತರ ಪ್ರದೇಶದ ಆಗ್ರಾದಲ್ಲಿ ರೈತರು ತಮ್ಮ ಬೆಳೆಗಳನ್ನು ನಾಶಗೊಳಿಸುತ್ತಿವೆಯೆಂದು ಆರೋಪಿಸಿ ಬೀಡಾಡಿ ಜಾನುವಾರುಗಳನ್ನು, ವಿಶೇಷವಾಗಿ ದನಗಳನ್ನು ಸರಕಾರಿ ಶಾಲೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳ ಆವರಣಗಳಿಗೆ ಸಾಗಿಸಿ ಕಟ್ಟಿಹಾಕುತ್ತಿದ್ದಾರೆ. ಅಲಿಗಡ ಜಿಲ್ಲೆಯೂ ಇತ್ತೀಚಿಗೆ ಇಂತಹ ವಿದ್ಯಮಾನಗಳಿಗೆ ಸಾಕ್ಷಿಯಾಗಿತ್ತು.
ಬೀಡಾಡಿ ದನಗಳಿಗೆ ಆಶ್ರಯವೊದಗಿಸಲು ತಕ್ಷಣವೇ ವ್ಯವಸ್ಥೆಗಳನ್ನು ಮಾಡುವಂತೆ ಇತ್ತೀಚಿಗೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಅವರು,ರಾಜ್ಯದ ವಿವಿಧ ಭಾಗಗಳಲ್ಲಿಯ ಗೋಮಾಳಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಂತೆಯೂ ಆದೇಶಿಸಿದ್ದರು.
ಆಗ್ರಾದಲ್ಲಿ ಕನಿಷ್ಠ ಆರು ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಶಾಲೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇದ್ರಗಳಲ್ಲಿ ಕೂಡಿಹಾಕಲಾಗಿದ್ದ ದನಗಳನ್ನು ಬಿಡುಗಡೆಗೊಳಿಸಿದ್ದಾರೆ. ಬಿಡಾಡಿ ದನಗಳು ಮತ್ತು ಗೂಳಿಗಳು ಬೆಳೆಗಳನ್ನು ತಿಂದು ನಷ್ಟವನ್ನುಂಟು ಮಾಡುವ ಮತ್ತು ಹಸಿರು ಪರಿಸರವನ್ನು ನಾಶಗೊಳಿಸುವ ಮೂಲಕ ಭಾರೀ ತಲೆನೋವನ್ನು ತಂದಿವೆ ಎಂದು ದೂರಿರುವ ಗ್ರಾಮಸ್ಥರು,ಜಾನುವಾರುಗಳ ‘ಜನಸಂಖ್ಯಾ ಸ್ಫೋಟ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.