ಹೆಚ್ಚು ಹಣ ಇರಿಸುವ ಮೂಲಕ ಆರ್ ಬಿಐ ಆರ್ಥಿಕತೆ ಮೇಲೆ ದಾಳಿ ನಡೆಸಿದೆ: ಬಿಜೆಪಿ ಸಂಸದ
ಹೊಸದಿಲ್ಲಿ,ಡಿ.31: ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟು ಬಂಡವಾಳವನ್ನು ತನ್ನ ಬಳಿ ಇರಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಮಧ್ಯೆ, ಈ ರೀತಿ ಹೆಚ್ಚಿನ ಹಣ ತನ್ನ ಬಳಿ ಇರಿಸುವ ಮೂಲಕ ಆರ್ಬಿಐ ಆರ್ಥಿಕತೆ ಮೇಲೆ ದಾಳಿ ಮಾಡುತ್ತಿದೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
ಹಣದ ಹರಿವಿನ ಕೊರತೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳು ಅರ್ಧದಲ್ಲಿ ಸ್ಥಗಿತಗೊಂಡಿವೆ ಎಂದು ಅವರು ಲೋಕಸಭೆಯಲ್ಲಿ ಅನುದಾನದ ಬೇಡಿಕೆ ಬಗ್ಗೆ ನಡೆಯುತ್ತಿದ್ದ ಚರ್ಚೆಯ ವೇಳೆ ತಿಳಿಸಿದ್ದಾರೆ. ಆಡಳಿತ ಪಕ್ಷ ರಿಸರ್ವ್ ಬ್ಯಾಂಕ್ನ ಸ್ವಾಯತ್ತೆಯ ಅತಿಕ್ರಮಣ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಶೇ.7 ಬಂಡವಾಳ ತೆಗೆದಿಡುತ್ತವೆ, ಸಂಪ್ರದಾಯವಾದಿ ಆರ್ಥಿಕತೆಗಳು ಶೇ.14ರಷ್ಟು ಬಂಡವಾಳ ಇಟ್ಟುಕೊಳ್ಳುತ್ತವೆ. ಆದರೆ ಆರ್ಬಿಐ ಶೇ.32 ಬಂಡವಾಳ ತೆಗೆದಿರಿಸಿದೆ. ಇದು ಆರ್ಬಿಐ ಮೇಲೆ ದಾಳಿಯಲ್ಲ, ಬದಲಿಗೆ ಆರ್ಥಿಕತೆ ಮೇಲೆ ಆರ್ಬಿಐ ನಡೆಸಿದ ದಾಳಿಯಾಗಿದೆ ಎಂದು ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.