ಸಂಸತ್ತಿಗೆ ಬಂದು ರಫೇಲ್ ಬಗ್ಗೆ ಮಾತನಾಡುವ ಧೈರ್ಯ ಪ್ರಧಾನಿಗಿಲ್ಲ: ರಾಹುಲ್ ಗಾಂಧಿ
ಹೊಸದಿಲ್ಲಿ,ಜ.2: ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆಗರೆದ ರಾಹುಲ್, ಪ್ರಧಾನಿಗೆ ರಫೇಲ್ ಒಪ್ಪಂದ ಬಗ್ಗೆ ಉತ್ತರಿಸುವ ಧೈರ್ಯವಿಲ್ಲ. ಹೀಗಾಗಿ ಅವರು ತಮ್ಮ ಕೊಠಡಿಯಲ್ಲಿ ಅಡಗಿಕುಳಿತುಕೊಂಡು, ಸಂಸತ್ತಿಗೆ ಗೈರು ಹಾಜರಾಗಿದ್ದಾರೆ ಎಂದು ಟೀಕಾದಾಳಿ ನಡೆಸಿದರು.
‘‘ಸಂಸತ್ತಿಗೆ ಬಂದು ರಫೇಲ್ ಬಗ್ಗೆ ಮಾತನಾಡುವ ಧೈರ್ಯ ಪ್ರಧಾನಿಗಿಲ್ಲ.ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸದನದಲ್ಲಿ ಎಐಎಡಿಎಂಕೆ ಸದಸ್ಯರ ಹಿಂದೆ ಅಡಗಿಕುಳಿತ್ತಿದ್ದಾರೆ’’ ಎಂದು ವ್ಯಂಗ್ಯವಾಡಿದರು.
ರಫೇಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ತನ್ನ ಬೆಡ್ ರೂಮ್ನಲ್ಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಮಾತನ್ನು ಉಲ್ಲೇಖಿಸಿ ಗೋವಾದ ಆರೋಗ್ಯ ಸಚಿವರು ಮಾತನಾಡಿರುವ ವಿಡಿಯೋವನ್ನು ಸದನದಲ್ಲಿ ಕೇಳಿಸಲು ರಾಹುಲ್ ಗಾಂಧಿ ಮಾಡಿರುವ ಮನವಿಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ತಳ್ಳಿಹಾಕಿದರು. ಟೇಪ್ ಪ್ಲೇ ಮಾಡುವುದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಲಿ ಆಕ್ಷೇಪವ್ಯಕ್ತಪಡಿಸಿದರು.