ನೀವು ಗಂಡಸರಾಗಿದ್ದರೆ ಬಸ್ಸನ್ನು ಮುಟ್ಟಿ: ಪ್ರತಿಭಟನಕಾರರಿಗೆ ಸವಾಲೆಸೆದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್
ಕೇರಳ ಹಿಂಸಾಚಾರ
#ತಮಿಳುನಾಡು ಅಧಿಕಾರಿಗೆ ವ್ಯಾಪಕ ಮೆಚ್ಚುಗೆ
ಕೊಚ್ಚಿ, ಜ.4: ಕೇರಳದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದ ಸಂದರ್ಭ ಪ್ರತಿಭಟನಕಾರರು ಕೆಎಸ್ ಆರ್ ಟಿಸಿ (ಕೇರಳ) ಬಸ್ ಗಳಿಗೆ ಕಲ್ಲೆಸೆದಿರುವ ಬಗ್ಗೆ ವರದಿಯಾಗಿದೆ. ಇಷ್ಟೇ ಅಲ್ಲದೆ ಪ್ರತಿಭಟನಕಾರರು ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ. ಈ ನಡುವೆ ಕೆಎಸ್ ಆರ್ ಟಿಸಿ ಬಸ್ಸೊಂದಕ್ಕೆ ಕಲ್ಲೆಸೆಯಲು ಬಂದ ಪ್ರತಿಭಟನಕಾರರನ್ನು ತಡೆದ ಪೊಲೀಸ್ ಅಧಿಕಾರಿಯೊಬ್ಬರು, “ತಾಕತ್ತಿದ್ದರೆ ಬಸ್ಸನ್ನು ಮುಟ್ಟಿ ನೋಡಿ” ಎಂದು ಸವಾಲೆಸೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳ-ತಮಿಳುನಾಡು ಗಡಿಭಾಗದ ಕಲಿಯಿಕ್ಕವಿಲ ಎಂಬಲ್ಲಿ ಪ್ರತಿಭಟನಕಾರರನ್ನು ಪೊಲೀಸ್ ಅಧಿಕಾರಿ ತಡೆದಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋವನ್ನು ‘ನ್ಯೂಸ್ 7’ ಸುದ್ದಿ ವಾಹಿನಿ ಬಿತ್ತರಿಸಿದೆ.
ಸಾರ್ವಜನಿಕ ವಾಹನವನ್ನು ತಾಕತ್ತಿದ್ದರೆ ಮುಟ್ಟಿ ನೋಡಿ ಎಂದು ಪ್ರತಿಭಟನಕಾರರಿಗೆ ಸವಾಲೆಸೆದ ಪೊಲೀಸ್ ಅಧಿಕಾರಿಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ನೀವು ಗಂಡಸರಾಗಿದ್ದರೆ ಬಂದು ವಾಹನವನ್ನು ಮುಟ್ಟಿ” ಎಂದು ಅಧಿಕಾರಿ ಹೇಳುತ್ತಿರುವುದು ವಿಡಿಯೋದಲ್ಲಿದೆ.